ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿಸಿದ್ದು ಯಾರು? : ಬಿಜೆಪಿ ಪ್ರಶ್ನೆ
Team Udayavani, Jan 2, 2022, 1:44 PM IST
ಬೆಂಗಳೂರು : ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿಸಿದ್ದು ಯಾರು ಎಂದು ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಭಾನುವಾರ ಟ್ವೀಟ್ ಮೂಲಕ ಪ್ರಶ್ನಿಸಿದೆ.
”ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಸುಳ್ಳಿನ ಮೆರವಣಿಗೆ ನಡೆಸುತ್ತಿರುವ ಕಾಂಗ್ರೆಸ್ಸಿಗರೇ, ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿಸಿದ್ದು ಯಾರು? ಡಿಪಿಆರ್ ತಯಾರು ಮಾಡಿದ್ದು ನಾನೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸತ್ಯ ಯಾವುದು, ಮಿಥ್ಯೆ ಯಾವುದು? #ಸುಳ್ಳಿನಜಾತ್ರೆ” ಎಂದು ಟ್ವೀಟ್ ಮಾಡಿದೆ.
”ಮಾನ್ಯ ಸಿದ್ದರಾಮಯ್ಯ ಅವರೇ, ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿ ಮಾಡಿದ್ದು ನನ್ನ ಸರ್ಕಾರ ಎಂದು ಹೇಳಿದ್ದೀರಿ. ಡಿಪಿಆರ್ ತಯಾರಾಗಿದ್ದು ನಮ್ಮ ಕಾಲದಲ್ಲಿ ಆಗಿದ್ದು ಎಂಬುದು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರು ಪಾದಯಾತ್ರೆಯ ಜೊತೆ ಸುಳ್ಳಿನಜಾತ್ರೆ ಮಾಡುತ್ತಿದ್ದಾರೆ,” ಎಂದು ಇನ್ನೊಂದು ಟ್ವೀಟ್ ಮಾಡಿದೆ.
”ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಗೆ ಒಂದು ದಿಕ್ಕು ತೋರಿಸಲಿಲ್ಲ.ಏಕೆಂದರೆ ಅಧಿಕಾರದಲ್ಲಿದ್ದಾಗ ಅವರ ಸಂಪೂರ್ಣ ಗಮನ ಹಿಂದೂ ಕಾರ್ಯಕರ್ತರ ದಮನ, ಟಿಪ್ಪು ಸುಲ್ತಾನ ವೈಭವೀಕರಣದ ಮೇಲಿತ್ತು. ಮೇಕೆದಾಟು ಯೋಜನೆಯ ವಿಳಂಬಕ್ಕೆ ನಿಜವಾದ ಕಾರಣೀಕರ್ತರೆಂದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್” ಎಂದು ಆಕ್ರೋಶ ಹೊರ ಹಾಕಿದೆ.