ಪುತ್ರ ರಕ್ಷಾ ರಾಮಯ್ಯಗೆ ಟಿಕೆಟ್ ಕೊಡುತ್ತೇನೆ: ಸೀತಾರಾಮ್ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ
Team Udayavani, Jul 4, 2022, 1:33 PM IST
ಬೆಂಗಳೂರು: ಪಕ್ಷದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಮನವೊಲಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ಪುತ್ರ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರದಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಬಲಿಜ ಸಮಾಜದ ಮುಖಂಡರ ಭೇಟಿಯ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಳೆದ ತಿಂಗಳು ಸೀತಾರಾಮ್ ಅಭಿಮಾನಿಗಳ ಸಭೆ ಮಾಡಿದ್ದರು. ಯಾಕೆ ಸಭೆ ಮಾಡುತ್ತಿದ್ದೀರಿ, ತಪ್ಪು ಸಂದೇಶ ಹೋಗುತ್ತದೆ ಎಂದು ನಾನು ಹೇಳಿದ್ದೆ. ಅವರು ಎರಡು ಬಾರಿ ಪರಿಷತ್ ಸದಸ್ಯರಾಗಿದ್ದರು. ಈ ಬಾರಿ ಅವರಿಗೆ ಟಿಕೆಟ್ ಕೊಡಬೇಕಿತ್ತು, ಆದರೆ ಬಹಳ ಜಾತಿಗೆ ಬಲ ಇಲ್ಲ, ಅವರಿಗೂ ಟಿಕೆಟ್ ಕೊಡಬೇಕಾಗುತ್ತದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷ ಎಂದರು.
ನಾನು ಸಿಎಂ ಆದಾಗ ಸೀತಾರಾಮ್ ರನ್ನು ಮಂತ್ರಿ ಮಾಡಿದ್ದೆ. ವಿಧಾನ ಪರಿಷತ್ ನಲ್ಲಿ ಸಭಾ ನಾಯಕರು ಆಗಿದ್ದರು. 2018 ಮಲ್ಲೇಶ್ವರದಲ್ಲಿ ಟಿಕೆಟ್ ನೀಡಲಾಗಿತ್ತು, ಆದರೆ ಅವರು ನಿಲ್ಲುವುದಿಲ್ಲ ಎಂದು ಹೇಳಿಬಿಟ್ಟರು. ಹಾಗಾಗಿ ಬೇರೆಯವರಿಗೆ ಟಿಕೆಟ್ ಕೊಟ್ಟರು. ಎರಡು ಪರಿಷತ್ ಸ್ಥಾನ ನೀಡಲು ಪ್ರಯತ್ನ ಮಾಡಿದ್ದೆವು. ಈ ಬಾರಿ ಕೂಡ ಸಾಕಷ್ಟು ಪ್ರಯತ್ನ ಮಾಡಿದ್ದೆವು ಎಂದರು.
ತನಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಸೀತಾರಾಮ್ ತಲೆಯಲ್ಲಿದೆ. ಮತ್ತೆ ಮೊನ್ನೆ ಸೀತಾರಾಂ ಕರೆದು ಮಾತನಾಡಿದ್ದೆ. ಯಾವುದೇ ಕಾರಣಕ್ಕೆ ಕಾಂಗ್ರೆಸ್ ಬಿಡಬೇಡ, ನಿನಗೆ ಎಂಎಲ್ ಎ, ಲೋಕಸಭಾ ಯಾವುದಾದರೂ ಟಿಕೆಟ್ ನೀಡೋಣ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಕ್ಷಾ ರಾಮಯ್ಯ ನಿಲ್ಲಿಸಲು ಹೇಳಿದ್ದೇನೆ. ಆದರೆ ಸೀತಾರಾಮ್ ಗೆ ಪರಿಷತ್ ಟಿಕೆಟ್ ಕೊಟ್ಟಿಲ್ಲವೆಂದು ಬೇಜಾರಿದೆ. ಸೀತಾರಾಮ್ ಪರ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ನಲ್ಲಿ ಹಿರಿಯ ಸ್ಥಾನ ನಿನಗೆ ಇದೆ ಅಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಸಿಂಗರ್ ಸಿಧು ಮೂಸೆವಾಲಾ ಹತ್ಯೆ ಮಾಡಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್ ಸಿರ್ಸಾ ಬಂಧನ
ಬಲಿಜ ಜನಾಂಗ ಕಾಂಗ್ರೆಸ್ ಜೊತೆ ಇದೆ. ಸೀತಾರಾಂ ನನ್ನ ಜೊತೆಗೆ ಇರುತ್ತೇನೆಂದು ಹೇಳಿದ್ದಾರೆ. ಆದರೆ ಮನಸಾರೆ ಮಾತುಗಳನ್ನು ಸೀತಾರಾಂ ಹೇಳಿಲ್ಲ. ಮುಂದೆ ನಿನ್ನ ಪರವಾಗಿ ಮಾತನಾಡಿ ಸ್ಥಾನ ಕೊಡಿಸುತ್ತೇನೆ ಎಂದಿದ್ದೇನೆ. ನಿಮ್ಮ ಜೊತೆ ಇರುತ್ತೇನೆ ಸರ್ ಎಂದು ಸೀತಾರಾಮ್ ಹೇಳಿದ್ದಾರೆ, ಆದರೆ ಕಾಂಗ್ರೆಸ್ ನಲ್ಲಿ ಇರುತ್ತೇನೆಂದು ಹೇಳುತ್ತಿಲ್ಲ ಎಂದು ಹೇಳಿದರು.
ಮುಂದೆ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡೋಣ. ನಾನೇ ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ಟಿಕೆಟ್ ಸಿಗದೆ ಹೋದರೆ ಸೀತಾರಾಂ ಗೆ ಪರಿಷತ್ ಸ್ಥಾನ ನೀಡೋಣ. ಸೀತಾರಾಮ್ ಕಾಂಗ್ರೆಸ್ ಬಿಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆಂದು ಗೊತ್ತಿದೆ ಎಂದು ಸಿದ್ದರಾಮಯ್ಯ ಸಭೆಗೆ ಬಂದಿದ್ದ ಸೀತಾರಾಮ್ ಅಭಿಮಾನಿಗಳ ಸಮ್ಮುಖದಲ್ಲಿ ಹೇಳಿದರು.