ನೆರೆ ಪರಿಹಾರ ಸಿಗಲಿಲ್ಲ: ಅವಶೇಷಗಳ ಅಡಿಯಲ್ಲೇ ಸಾಗುತ್ತಿದೆ ಬದುಕು
Team Udayavani, Dec 3, 2021, 2:11 PM IST
ಕಟಪಾಡಿ: ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಸುಮತಿ ಮರಕಾಲ್ತಿ ಅವರ ವಾಸದ ಮನೆಯು 2020 ಸೆಪ್ಟಂಬರ್ ಭೀಕರ ಜಲಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಇದೀಗ ಸರಕಾರದ ವಿಶೇಷ ಪ್ಯಾಕೇಜ್ ಪರಿಹಾರ ಕೈಗೆಟುಕದೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ ಮನೆಯ ಅವಶೇಷಗಳೊಳಗೆ ಸಾಗುತ್ತಿದೆ ಈಕೆಯ ಬದುಕಿನ ಬಂಡಿ.
ಆಳೆತ್ತರದಲ್ಲಿ ನುಗ್ಗಿ ಬಂದಂತಹ ಪ್ರವಾಹಕ್ಕೆ ಮಣಿಪುರದ ಸುಮತಿ ಮರಕಾಲ್ತಿ ಅವರ ಬಟ್ಟೆಬರೆ, ಅಕ್ಕಿ, ತಲೆದಿಂಬಿನೊಳಗೆ ಇರಿಸಲಾಗಿದ್ದ ಚೂರುಪಾರು ಚಿನ್ನವೂ ಮನೆಯ ಜೊತೆಗೆ ಕೊಚ್ಚಿಕೊಂಡು ಹೋಗಿತ್ತು. ಆಸರೆ ಕಳೆದುಕೊಂಡ ಅನಾರೋಗ್ಯ ಪೀಡಿದ ಕುಟುಂಬದ ಸಂತ್ರಸ್ತೆಗೆ ಟರ್ಪಲು ಹೊದಿಕೆಯೊಳಕ್ಕೆ ನುಗ್ಗುವ ಸೂರ್ಯ ರಶ್ಮಿಗಳೇ ಬೆಳಕು, ಚಂದ್ರನ ನೆರಳೇ ಆಸರೆಯಾಗಿ ದಿನಕಳೆಯುವಂತಹ ಅನಿವಾರ್ಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದು, ಅಯೋಮಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಸಿಕ್ಕಲ್ಲಿ ಕೂಲಿ ನಾಲಿ ಮಾಡಿ ಬದುಕು ಸವೆಸುತ್ತಿರುವ ಅನಾರೋಗ್ಯ ಪೀಡಿತ ಕುಟುಂಬಕ್ಕೆ ಆಸರೆ ಇಲ್ಲವಾಗಿದೆ.
ಪ್ರಕೃತಿ ವಿಕೋಪದಡಿ ಸರಕಾರದಿಂದ ಘೋಷಿತ ವಿಶೇಷ ಪ್ಯಾಕೇಜ್ ನ ಅನುದಾನದ ಯಾವುದೇ ಕಂತು ಕೈ ಸೇರದೆ ಅಳಿದುಳಿದ ಮನೆಯ ಅವಶೇಷಗಳಡಿ ಟರ್ಪಲು ಹೊದಿಸಿ ತನ್ನ ಬದುಕನ್ನು ಸವೆಸುವಂತಾಗಿರುವುದು ದುರದೃಷ್ಟಕರ.
ಇದೀಗ ಉಭಯ ಸಂಕಟವನ್ನು ಅನುಭವಿಸುತ್ತಿರುವ ಸಂತ್ರಸ್ತರು ವಾಸಕ್ಕೆ ಯೋಗ್ಯ ಮನೆಯಲ್ಲಿ ಬದುಕು ಕಟ್ಟುವ ತವಕ ಮುರುಕಲು ಮನೆ ಸೆಳೆದುಕೊಳ್ಳದಂತೆ ಸರಕಾರವು ಘೋಷಿತ ವಿಶೇಷ ಪ್ಯಾಕೇಜ್ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ಸಂತ್ರಸ್ತರ ಬವಣೆಗೆ ಸ್ಪಂದಿಸುವಂತೆ ಜನ ಆಗ್ರಹಿಸುತ್ತಿದ್ದಾರೆ.