ಗಾನ ಗಂಧರ್ವ, ತೆಂಕು ತಿಟ್ಟಿನ ಅಗ್ರ ಪಂಕ್ತಿಯ ಭಾಗವತ ಪದ್ಯಾಣ ಗಣಪತಿ ಭಟ್ ವಿಧಿವಶ
ಭಾಗವತರಾಗಿ ಮಿಂಚಿದ್ದ ಪದ್ಯಾಣರು ವೃತ್ತಿಪರ ಭಾಗವತರಾಗಿ ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದರಾಗಿದ್ದರು.
Team Udayavani, Oct 12, 2021, 9:43 AM IST
ಬಂಟ್ವಾಳ:ತೆಂಕು ತಿಟ್ಟಿನ ಅಗ್ರ ಪಂಕ್ತಿಯ ಭಾಗವತ ಪದ್ಯಾಣ ಗಣಪತಿ ಭಟ್ (66ವರ್ಷ) ಮಂಗಳವಾರ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ 50 ವರ್ಷಗಳಿಂದಲೂ ಯಕ್ಷರಂಗದಲ್ಲಿ ಭಾಗವತರಾಗಿ ಮಿಂಚಿದ್ದ ಪದ್ಯಾಣರು ವೃತ್ತಿಪರ ಭಾಗವತರಾಗಿ ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದರಾಗಿದ್ದರು.
ತೆಂಕು ತಿಟ್ಟಿನ ಜನಪ್ರಿಯ ಮೇಳವಾದ ಹೊಸನಗರ ಮೇಳ,ಎಡನೀರು ಮೇಳ, ಹನುಮಗಿರಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಪದ್ಯಾಣ ಕುಟುಂಬವೆ ಯಕ್ಷಗಾನ ರಂಗಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದು, ಹಿರಿಯ ಕಲಾವಿದರ ಅಗಲಿಕೆ ತೆಂಕು ತಿಟ್ಟಿನ ಯಕ್ಷರಂಗಕ್ಕೆ ಅಪಾರ ನೋವು ಹಾಗೂ ತುಂಬಲಾರದ ನಷ್ಟ ತಂದಿದೆ.
26 ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಈ ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಭಾಗವತ ಪದ್ಯಾಣ ಗಣಪತಿ ಭಟ್. ಇವರ ಭಾಗವತಿ ಕೆಗೆ ಎಸ್ ಪಿ ಬಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.