ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾದ ಎಸ್.ಎಂ ಕೃಷ್ಣ ನಿವಾಸ
ಏಕಕಾಲದಲ್ಲಿ ಬಿಎಸ್ವೈ,ಆರ್.ಅಶೋಕ್, ಸುಮಲತಾ , ರಮೇಶ್ ಜಾರಕಿಹೋಳಿ, ಡಾ.ಸುಧಾಕರ್ ಭೇಟಿ
Team Udayavani, May 26, 2019, 3:30 PM IST
ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಮೂರು ದಿನದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎಂ .ಕೃಷ್ಣ ಅವರ ಸದಾಶಿವನಗರದ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಂತೆ ಗೋಚರಿಸಿತು.ಒಂದೇ ದಿನ ಹಲವು ಪ್ರಮುಖ ನಾಯಕರು ನಿವಾಸಕ್ಕೆ ಭೇಟಿ ನೀಡುವ ಮೂಲಕ ಕುತೂಹಲಕ್ಕೆ ಕಾರಣವಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಪ್ರಚಾರ ಮಾಡಿ ಭರ್ಜರಿ ಗೆಲುವಿಗೆ ಕಾರಣವಾದುದಕ್ಕೆಎಸ್.ಎಂ.ಕೃಷ್ಣ ಅವರಿಗೆ ಧನ್ಯವಾದ ಸಲ್ಲಿಸಿದರು.
ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿ ನಾಯಕರು ಆಗಮಿಸಿದ್ದ ವೇಳೆಯಲ್ಲಿ ಆಗಮಿಸಿ ಕೃಷ್ಣ ಅವರಿಗೆ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
ಕೃಷ್ಣ ಆದರ್ಶಪ್ರಾಯರು; ಸುಧಾಕರ್
ಚಿಕ್ಕಬಳ್ಳಾಪುರಕಾಂಗ್ರೆಸ್ ಶಾಸಕ ಡಾ .ಕೆ.ಸುಧಾಕರ್ ಅವರು ಮಾತನಾಡಿ , ಎಸ್.ಎಂ. ಕೃಷ್ಣ ಅವರು ನನ್ನ ರಾಜಕೀಯ ಗುರುಗಳು, ಹಿತೈಷಿಗಳು, ನನ್ನ ತಂದೆ ಸಮಾನ. ನನ್ನ ಭೇಟಿ ವೈಯಕ್ತಿಕ, ನಾನು ತಿಂಗಳಿಗೊಮ್ಮೆ ಭೇಟಿಯಾಗುತ್ತೇನೆ. ರಮೇಶ್ ಜಾರಕಿಹೊಳಿ ಅವರು ನಮ್ಮ ಮನೆಗೆ ಬಂದಿದ್ದರು. ಅವರೊಂದಿಗೆ ಬಂದಿದ್ದೆ. ಅಲ್ಲಿ ಯಡಿಯೂರಪ್ಪ ಅವರು ಬಂದಿದ್ದರು. ನಾವು ಎಸ್.ಎಂ.ಕೃಷ್ಣ ಅವರನ್ನು ಮಾತ್ರ ಭೇಟಿ ಮಾಡಿದ್ದೇವೆ. ಎಸ್.ಎಂ.ಕೃಷ್ಣ ಯಾವುದೇ ಪಕ್ಷದಲ್ಲಿರಲಿ ಅವರು ಆದರ್ಶ ಪ್ರಾಯರು ಅವರು ನಮ್ಮ ನಾಯಕರು ಎಂದರು.
ಕಾಕತಾಳೀಯ ಅಷ್ಟೇ
ಪಕ್ಷದ ವಿಚಾರದಲ್ಲಿ ಮಾತನಾಡಲು ನಾನು , ಯಡಿಯೂರಪ್ಪ ಅವರೊಂದಿಗೆ ಬಂದಿದ್ದೆ, ಇಲ್ಲಿ ಯಾವುದೇ ಮಾತುಕತೆಗಳಾಗಿಲ್ಲ.ಸುಧಾಕರ್, ರಮೇಶ್ ಜಾರಕಿಹೊಳಿ ಅವರು ಎಸ್.ಎಂ. ಕೃಷ್ಣ ಅವರ ಅಭಿಮಾನಿಗಳು . ಅವರೊಂದಿಗೆ ನಾವು ಮಾತುಕತೆ ನಡೆಸಿಲ್ಲ ಎಂದರು.
ಸರ್ಕಾರದ ಅಸ್ತಿತ್ವದ ಬಗ್ಗೆ ರೇವಣ್ಣನ ನಿಂಬೆ ಹಣ್ಣಿನ ಬಳಿ ಕೇಳಿ ಎಂದು ಕೈಯಲ್ಲಿದ್ದ ನಿಂಬೆ ಹಣ್ಣನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.
ಚಿತ್ರಗಳು : ಫಕ್ರುದ್ದೀನ್