ಐಎಂಎ ಬಹುಕೋಟಿ ವಂಚನೆ ಕೇಸ್ ಸಿಬಿಐಗೆ ಒಪ್ಪಿಸಬೇಕು: ಬಿಎಸ್ ವೈಗೆ ಮನವಿ
Team Udayavani, Jun 15, 2019, 5:05 PM IST
ಬೆಂಗಳೂರು: ಐಎಂಎ ಜ್ಯುವೆಲರಿಯ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಸಂತ್ರಸ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಅಹೋರಾತ್ರಿ ಧರಣಿ ಸ್ಥಳದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮಹಮ್ಮದ್ ಮನ್ಸೂರ್ ಖಾನ್ ಐಎಂಎ ಸಂಸ್ಥೆಯೊಂದನ್ನು ಸ್ಥಾಪಿಸಿ ಹಣ ಹೂಡಿದವರಿಗೆ ಶೇ.7ರಷ್ಟು ಬಡ್ಡಿ ಕೊಡುತ್ತೇನೆಂದು ಪವಿತ್ರ ಗ್ರಂಥವಾದ ಕುರಾನ್ ಮೇಲೆ ಪ್ರಮಾಣ ಮಾಡಿ ನಂಬಿಸಿ, ನಮ್ಮಿಂದ ಹಾಗೂ ನಮ್ಮಂತಹ ಸಾವಿರಾರು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುತ್ತಾನೆ.
ಕೆಲವು ದಿನಗಳ ನಂತರ ಗ್ರಾಹಕರಿಗೆ ನೀಡುತ್ತಿದ್ದ ಬಡ್ಡಿ ದರವನ್ನು ಶೇ.7ರಿಂದ ಶೇ.5ಕ್ಕೆ, ಆ ನಂತರ ಶೇ.5ರಿಂದ ಶೇ.3ಕ್ಕೆ, ಶೇ.3ರಿಂದ 2ಕ್ಕೆ, ಕೊನೆಗೆ ಶೇ.2ರಿಂದ ಶೇ.0ಗೆ ಇಳಿಸಿ ನಮ್ಮ ಹಣವನ್ನು ಹೊಡೆದುಕೊಂಡು ತಮ್ಮ ಕುಟುಂಬ ಸಮೇತ ಪರಾರಿಯಾಗಿದ್ದಾನೆ.
ಈವರೆಗೆ ಖಾನ್ ವಿರುದ್ದ ಸುಮಾರು 30,000 ದೂರುಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಸುಮಾರು 2ಲಕ್ಷ ಜನರಿಗೆ ವಂಚಿಸಿದ್ದಾನೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸಂತ್ರಸ್ತರು ಮನವಿಯಲ್ಲಿ ತಿಳಿಸಿದ್ದಾರೆ.