ಐಟಿ ದಾಳಿ ಪ್ರಕರಣ; ಡಿಕೆಶಿ ಅರ್ಜಿ ವಜಾಗೊಳಿಸಿದ ಕೋರ್ಟ್, ವಿಚಾರಣೆ ಮುಂದುವರಿಕೆ
Team Udayavani, Jun 25, 2019, 6:42 PM IST
ಬೆಂಗಳೂರು: ದೆಹಲಿ, ಬೆಂಗಳೂರು ಮನೆ ಮೇಲಿನ ಐಟಿ ದಾಳಿ ಪ್ರಕರಣದಿಂದ ತನ್ನ ಹೆಸರನ್ನು ಕೈಬಿಡಬೇಕೆಂದು ಕೋರಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಂಗಳವಾರ ವಜಾಗೊಳಿಸುವ ಮೂಲಕ ಡಿಕೆಶಿ ವಿಚಾರಣೆಯನ್ನು ಎದುರಿಸಬೇಕಾಗಿದೆ.
2017ರ ಆಗಸ್ಟ್ ನಲ್ಲಿ ಆದಾಯ ತೆರಿಗೆ ಇಲಾಖೆ ದೆಹಲಿ, ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಡಿಕೆಶಿ ತೆರಿಗೆ ವಂಚನೆ ಮಾಡಿರುವುದಾಗಿ ಐಟಿ ಇಲಾಖೆ ದೂರು ದಾಖಲಿಸಿತ್ತು.
ವಿಚಾರಣೆಗೆ ತಡೆ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶ ರಾಮಚಂದ್ರ ಹುದ್ದರ್ ಅವರು ವಜಾಗೊಳಿಸಿ, ಕೋರ್ಟ್ ನಲ್ಲಿಯೇ ವಿಚಾರಣೆ ಎದುರಿಸುವಂತೆ ತೀರ್ಪು ನೀಡಿದ್ದಾರೆ.
ಬೆಳಗ್ಗೆ 11.30ಕ್ಕೆ ಸಚಿವ ಡಿಕೆ ಶಿವಕುಮಾರ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಹಾಜರಾಗಿದ್ದರು. ಸಂಜೆ 5.30ಕ್ಕೆ ನ್ಯಾಯಾಧೀಶರು ತೀರ್ಪನ್ನು ಪ್ರಕಟಿಸಿದ್ದರು. ತೀರ್ಪು ಪ್ರಕಟವಾದ ಬಳಿಕ ಡಿಕೆಶಿ ತಮ್ಮ ಪರ ವಕೀಲರ ಜೊತೆ ಮಾತುಕತೆಯಲ್ಲಿ ತೊಡಗಿದ್ದಿರುವುದು ಕಂಡು ಬಂದಿತ್ತು. ವಾಲ್ಮೀಕಿ ಸಮುದಾಯದ ಪ್ರತಿಭಟನೆಯ ಬಿಸಿ ತಟ್ಟಿದ ಹಿನ್ನೆಲೆಯಲ್ಲಿ ಡಿಕೆಶಿ ಕಾರನ್ನು ಬಿಟ್ಟು ಮೆಟ್ರೋದಲ್ಲಿ ತೆರಳಿದ್ದರು.