ರಾಜ್ಯಪಾಲರ ಭೇಟಿಯಾಗುವರೆಗೆ ಕಳಸಾ – ಬಂಡೂರಿ ಧರಣಿ ನಿಲ್ಲದು
Team Udayavani, Oct 18, 2019, 1:01 PM IST
ಬೆಂಗಳೂರು: ಮಹಾದಾಯಿ ಕಳಸಾ – ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಎರಡನೇ ದಿನವೂ ಪ್ರತಿಭಟನೆ ಮುಂದುವರಿಸಿದ್ದಾರೆ.
ರಾಜ್ಯಪಾಲರ ಭೇಟಿಗೆ ಅವಕಾಶ ನೀಡುವವರೆಗೂ ಧರಣಿ ನಡೆಸಲಿದ್ದು, ಅಧಿಸೂಚನೆ ಹೊರಡಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ವೀರೇಶ ಸಬರದಮಠ, ಗುರುವಾರದಿಂದ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯಪಾಲರನ್ನು ಭೇಟಿ ಮಾಡುವವರೆಗೂ ಹಿಂದೆ ಸರಿಯುವುದಿಲ್ಲ. ಈವರೆಗೂ ಯಾವುದೇ ಅಧಿಕಾರಿ ನಮ್ಮನ್ನು ಸಂಪರ್ಕಿಸಿಲ್ಲ. ಗುರುವಾರ ರಾತ್ರಿ ಮಳೆಯಲ್ಲಿಯೇ ಕುಳಿತಿದ್ದೇವೆ. ರಾಜ್ಯಪಾಲರ ಭೇಟಿ ನಂತರವಷ್ಟೇ ಪ್ರತಿಭಟನೆ ಹಿಂಪಡೆಯಲಾಗುವುದು ಎಂದರು.