ಕಾದು ನೋಡಿ…ಒಬ್ಬನೇ ಅಲ್ಲ ಕೆಲ ಶಾಸಕರು ಸೇರಿ ರಾಜೀನಾಮೆ ಕೊಡ್ತೇವೆ; ಜಾರಕಿಹೊಳಿ
Team Udayavani, Apr 24, 2019, 6:36 PM IST
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಶನ್ ಕಮಲದ ಸದ್ದು ಹೆಚ್ಚಾಗತೊಡಗಿದೆ. ಏತನ್ಮಧ್ಯೆ ರಾಜೀನಾಮೆ ಕೊಡುವ ನಿರ್ಧಾರ ಅಚಲವಾಗಿದ್ದು, ಒಂದು ವಾರ ಕಾದು ನೋಡಿ. ಒಳ್ಳೆಯ ಸುದ್ದಿ ಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಬುಧವಾರ ಪುನರುಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನೊಬ್ಬನೇ ರಾಜೀನಾಮೆ ಕೊಡಲು ಈಗಲೂ ತಯಾರಾಗಿದ್ದೇನೆ. ಆದರೆ ಒಬ್ಬರೇ ರಾಜೀನಾಮೆ ಕೊಟ್ಟರೆ ಉಪಯೋಗವಿಲ್ಲ. ಸಾಮೂಹಿಕವಾಗಿ ಕೆಲವು ಶಾಸಕರು ಸೇರಿ ರಾಜೀನಾಮೆ ಕೊಡುತ್ತೇವೆ. ಅದಕ್ಕಾಗಿ ನಮ್ಮ ಹಿತೈಷಿಗಳು, ಆತ್ಮೀಯರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಡಿಕೆಶಿ ನಮ್ಮ ಲೆವೆಲ್ ಗೆ ಅಲ್ಲ: ಏಕವಚನದಲ್ಲಿ ವಾಗ್ದಾಳಿ
ಡಿಕೆ ಶಿವಕುಮಾರ್ ನಮ್ಮ ಲೆವೆಲ್ಲ್ ಗೆ ಅಲ್ಲ. ನಮ್ಮ ಲೀಡರ್ ಏನಿದ್ರೂ ರಾಹುಲ್ ಗಾಂಧಿ. ನಾವು ಅವರ ಬಳಿ ಚರ್ಚಿಸುತ್ತೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಚರ್ಚಿಸುವ ಅಗತ್ಯವಿಲ್ಲ ಎಂದು ಏಕವಚನದಲ್ಲಿ ತಿರುಗೇಟು ನೀಡಿದ್ದಾರೆ.