ದಕ್ಷಿಣ ಆಫ್ರಿಕಾದಲ್ಲಿ ಸೆರೆ ಸಿಕ್ಕ ರವಿ ಪೂಜಾರಿ; ಬೆಂಗಳೂರಿಗೆ ಕರೆ ತಂದ ರಾಜ್ಯ ಪೊಲೀಸ್ ತಂಡ
ಭಾನುವಾರ ಮಧ್ಯರಾತ್ರಿ 12.40ರ ಸುಮಾರಿಗೆ ರವಿ ಪೂಜಾರಿಯನ್ನು ರಾಜ್ಯ ಪೊಲೀಸರ ತಂಡ ಏರ್ ಫ್ರಾನ್ಸ್ ವಿಮಾನದಲ್ಲಿ ಕರೆ ತಂದಿದೆ.
Team Udayavani, Feb 24, 2020, 10:03 AM IST
ಬೆಂಗಳೂರು/ದೆಹಲಿ:ಕಳೆದ ಹದಿನೈದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾನುವಾರ ತಡರಾತ್ರಿ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಬೆಂಗಳೂರಿಗೆ ಕರೆ ತಂದಿರುವುದಾಗಿ ವರದಿ ತಿಳಿಸಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಮಧ್ಯರಾತ್ರಿ 12.40ರ ಸುಮಾರಿಗೆ ರವಿ ಪೂಜಾರಿಯನ್ನು ರಾಜ್ಯ ಪೊಲೀಸರ ತಂಡ ಏರ್ ಫ್ರಾನ್ಸ್ ವಿಮಾನದಲ್ಲಿ ಕರೆ ತಂದಿದೆ. ಕಳೆದ ವರ್ಷ ಸೆನೆಗಲ್ ನಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದು ರವಿ ಪರಾರಿಯಾಗಿದ್ದ.
ಬಳಿಕ ಸೆನೆಗಲ್ ಪೊಲೀಸರು, ಭಾರತದ ಗುಪ್ತಚರ ಸಂಸ್ಥೆ ರಾ ಹಾಗೂ ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ದಕ್ಷಿಣ ಆಫ್ರಿಕಾದ ಕುಗ್ರಾಮವೊಂದರಲ್ಲಿ ಬಂಧಿಸಿದ್ದರು. ನಂತರ ರವಿ ಪೂಜಾರಿಯನ್ನು ಸೆನೆಗಲ್ ಸರ್ಕಾರ ಗಡಿಪಾರು ಮಾಡಿ, ಕರ್ನಾಟಕ ಪೊಲೀಸರ ವಶಕ್ಕೆ ಒಪ್ಪಿಸಿತ್ತು.
ಛೋಟಾ ರಾಜನ್, ದಾವೂದ್ ತಂಡದಲ್ಲಿ ಗುರುತಿಸಿಕೊಂಡಿದ್ದ ರವಿ ಪೂಜಾರಿ ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗಣ್ಯರಿಗೆ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಗಳು ಈತನ ವಿರುದ್ಧ ಇವೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೇ 50ಕ್ಕೂ ಹೆಚ್ಚು ಪ್ರಕರಣಗಳಿವೆ.