ಕಾಸರಗೋಡಿನಲ್ಲಿ ಡೆಂಗ್ಯೂ ಭೀತಿ 62 ಮಂದಿ ಆಸ್ಪತ್ರೆಗೆ ದಾಖಲು
Team Udayavani, May 23, 2018, 12:36 PM IST
ಕಾಸರಗೋಡು: ಜಿಲ್ಲೆಯಲ್ಲಿ ಮಾರಕ ಡೆಂಗ್ಯೂ ಜ್ವರ ವ್ಯಾಪಿಸುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಡೆಂಗ್ಯೂ ಜ್ವರ ಬಾಧಿಸಿದ ಮತ್ತೆ ಮೂವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ವಾಣಿನಗರ ಚೆನ್ನಮೂಲೆಯ ಶೀನ ನಾಯ್ಕ (38), ಸಹೋದರ ಶಶಿಧರ (35), ಕಿನ್ನಿಂಗಾರಿನ ವಿಜಯ (32) ಅವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಪರಪ್ಪ, ಪನತ್ತಡಿ, ಕಳ್ಳಾರು ಮೊದಲಾದೆಡೆಗಳಲ್ಲಿ ಅತೀ ಹೆಚ್ಚು ಡೆಂಗ್ಯೂ ಜ್ವರ ಭೀತಿ ಉಂಟಾಗಿದೆ. ಮೇ 5ರಿಂದ 15ರ ಅವಧಿಯಲ್ಲಿ ಜಿಲ್ಲೆಯಲ್ಲಿ 62 ಮಂದಿಗೆ ಡೆಂಗ್ಯೂ ಜ್ವರ ಬಾಧಿಸಿರುವುದನ್ನು ದೃಢಪಡಿಸಲಾಗಿದೆ. ಕಳೆದ ವರ್ಷ 1,473 ಮಂದಿಗೆ ಡೆಂಗ್ಯೂ ಜ್ವರ ತಗಲಿತ್ತು.
ಡೆಂಗ್ಯೂ ಬಾಧಿತ ಮಡಿಕೈ ನಿವಾಸಿಯೋರ್ವರು ಈಗಾಗಲೇ ಸಾವಿಗೀಡಾಗಿದ್ದಾರೆ. ಮೇ ತಿಂಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬೇಸಗೆ ಮಳೆ ಸುರಿದಿರುವುದು ಡೆಂಗ್ಯೂ ಹರಡುವ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚಾಗಿ ಡೆಂಗ್ಯೂ ಜ್ವರ ಹರಡಲು ಕಾರಣವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಜ್ವರ ಇನ್ನಷ್ಟು ಪ್ರದೇಶಗಳಿಗೆ ಹರಡದಿರಲು ಮತ್ತು ನಿಯಂತ್ರಿಸಲು ಅಗತ್ಯದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.