ಸಂತ್ರಸ್ತರಿಗೆ ಸಾಂತ್ವನ ನೀಡಿದ ಜಿಲ್ಲಾಧಿಕಾರಿ ನೇತೃತ್ವದ ತಂಡ
Team Udayavani, Aug 13, 2019, 5:44 AM IST
ಕಾಸರಗೋಡು: ಬಿರುಸಿನ ಗಾಳಿಮಳೆಯ ಪರಿಣಾಮ ಜಿಲ್ಲೆಯಲ್ಲಿ ಆರಂಭಿಸಲಾದ ಪುನರ್ವಸತಿ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸಹವರ್ತಿಗಳು ಸಂತ್ರಸ್ತರ ಜತೆಗೆ ಸಾಂತ್ವನ ಒದಗಿಸುವುದರೊಂದಿಗೆ ಧೈರ್ಯ ಮೂಡಿಸಿದರು.
ಶಿಬಿರದ ಎಲ್ಲ ವಿಚಾರಗಳ ಬಗ್ಗೆ ಅವ ಲೋಕನ ನಡೆಸಿದ ನಂತರ ಜಿಲ್ಲಾಧಿಕಾರಿ ಮತ್ತು ಸಹವರ್ತಿಗಳು ಮಧ್ಯಾಹ್ನದ ಭೋಜನವನ್ನೂ ಸಂತ್ರಸ್ತರ ಜೊತೆಗೆ ಉಂಡಿದ್ದಾರೆ. ಕಾಡಂಗೋಡು ಸರಕಾರಿ ಎಫ್.ವಿ.ಎಚ್.ಎಸ್.ಎಸ್.ನ ಪುನರ್ವಸತಿ ಕೇಂದ್ರದ ಸಂತ್ರಸ್ತರ ಜತೆಗೆ ಜಿಲ್ಲಾಡಳಿತದ ಅಧಿಕಾರಿಗಳು ಭೋಜನ ಸೇವಿಸಿದ್ದಾರೆ. ಅನಂತರ ಚೆರುವತ್ತೂರು ಕೊಟಪಳ್ಳಿ ಮದ್ರ ಸಾದ ಶಿಬಿರವನ್ನೂ ಜಿಲ್ಲಾಧಿಕಾರಿ ನೇತೃತ್ವದ ತಂಡ ಸಂದರ್ಶಿಸಿತು. ಶಿಬಿರದ ಸಂತ್ರಸ್ತರ ಅನಿವಾರ್ಯ ಸೌಲಭ್ಯಗಳು, ಆಹಾರದ ಗುಣಮಟ್ಟ ಖಚಿತಪಡಿಸಲಾಗಿದೆ.
ಪಾಲಾತ್ತಡಂ ಕಣ್ಣೂರು ವಿ.ವಿ. ಕ್ಯಾಂಪಸ್ಶಿಬಿರವನ್ನು ಉಪ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್ ಮತ್ತು ಹೊಸದುರ್ಗ ತಾಲೂಕು ತಹಸೀಲ್ದಾರ್ ಶಶಿಧರನ್ ಪಿಳ್ಳೆ ಎಸ್. ಸಂದರ್ಶಿಸಿದರು. ಅಲ್ಲಿನ ಸೌಲಭ್ಯ, ಆಹಾರ ಗುಣಮಟ್ಟ ಖಚಿತಪಡಿಸಿದರು. ಸಂತ್ರಸ್ತರ ಜತೆಗೆ ಅವರು ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್, ಚುನಾವಣೆ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಹುಸೂರ್ ಶಿರಸ್ತೇದಾರ್ ಕೆ. ನಾರಾಯಣನ್ ಮೊದಲಾದವರು ವಿವಿಧ ಶಿಬಿರಗಳನ್ನು ಸಂದರ್ಶಿಸಿ, ಸಂತ್ರಸ್ತರ ಜೊತೆ ಭೋಜನ ಸೇವಿಸಿದರು.
ಮಂಜೇಶ್ವರ ತಾಲೂಕಿನಲ್ಲಿ ಸಹಾಯಕ ಜಿಲ್ಲಾಧಿಕಾರಿ (ಆರ್.ಆರ್.) ಪಿ.ಆರ್.ರಾಧಿಕಾ, ಕಾಸರಗೋಡು ತಾಲೂಕಿನಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್. ದೇವಿದಾಸ್, ಹೊಸದುರ್ಗ ತಾಲೂಕಿನಲ್ಲಿ ಸಹಾಯಕ ಜಿಲ್ಲಾಧಿಕಾರಿ (ಚುನಾವಣೆ) ಎ.ಕೆ. ರಮೇಂದ್ರನ್, ವೆಳ್ಳರಿಕುಂಡ್ ತಾಲೂಕಿನಲ್ಲಿ ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್.) ಕೆ.ರವಿಕುಮಾರ್ ಅವರು ಜಿಲ್ಲಾಧಿಕಾರಿ ಡಾ| ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಶಿಬಿರಗಳನ್ನು ಏಕೀಕೃತಗೊಳಿಸುತ್ತಿದ್ದಾರೆ.