ಕೃಷಿ, ಮಣ್ಣು, ಜಲ ಸಂರಕ್ಷಣೆಗೆ ಆದ್ಯತೆ
Team Udayavani, Apr 1, 2017, 2:55 PM IST
ಕಾಸರಗೋಡು: ಕೃಷಿ ಮತ್ತು ಮಣ್ಣು – ಜಲಸಂರಕ್ಷಣೆಗೆ ಆದ್ಯತೆ ನೀಡಿ ಬದಿಯಡ್ಕ ಗ್ರಾ.ಪಂ.ನ 2017-18ನೇ ಸಾಲಿನ ಮುಂಗಡಪತ್ರವನ್ನು ಪಂಚಾಯತ್ ಉಪಾಧ್ಯಕ್ಷೆ ಸೈ ಬುನ್ನೀಸಾ ಮೊಯ್ದಿನ್ ಕುಟ್ಟಿ ಅವರು ಮಂಡಿಸಿದರು.
ಒಟ್ಟು ಆದಾಯ 15,92,29,700 ರೂಪಾಯಿ, 15,28,75,000 ರೂ ವೆಚ್ಚ ಹಾಗೂ 63,54,700 ರೂಪಾಯಿಗಳ ಉಳಿತಾಯದ ಬಜೆಟನ್ನು ಮಂಡಿಸಲಾಯಿತು.
ಗ್ರಾಮ ಪಂಚಾಯತ್ಗೆ ಐಎಸ್ಒ ದೃಢೀಕರಣ ಪತ್ರ ಲಭಿಸಲಿಕ್ಕಿರುವ ಕ್ರಮ ವನ್ನು ಕೈಗೊಳ್ಳುವುದು. ಇದರ ಅಂಗವಾಗಿ ಮಾನವ ಹಕ್ಕು ದಾಖಲೆ, ಸೇವಾ ಹಕ್ಕು ದಾಖಲೆಗಳನ್ನು ಪರಿಷ್ಕರಿಸಿ ಪ್ರಕಟಿಸು ವುದು, ಪಂಚಾಯತ್ನಿಂದ ಲಭ್ಯವಿರುವ ಸೇವಾ ಅವಶ್ಯಕತೆಗಳ ಮರು ಉತ್ತರವನ್ನು ಅರ್ಜಿದಾರನ ಮೊಬೈಲ್ ಫೋನಿನಲ್ಲಿ ತಿಳಿಯಪಡಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಎಲ್ಲ ಸೇವೆಗಳನ್ನು, ವಿವರಗಳನ್ನೂ ಒಳಗೊಂಡಿರುವ ಪ್ರತ್ಯೇಕ ವೆಬ್ಸೈಟನ್ನು ಆರಂಭಿಸಲಾಗುವುದು.
6,784 ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿರುವ ಬದಿಯಡ್ಕ ಗ್ರಾಮ ಪಂಚಾಯತ್ನ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿಗೆ ಅಗತ್ಯವಾದ ಜೈವಿಕ ಗೊಬ್ಬರ ವಿತರಣೆ, ಕೃಷಿ ಅಭಿವೃದ್ಧಿಗೆ ಬೇಕಾಗುವ ಯಂತ್ರಗಳ ಬಳಕೆ, ತರಕಾರಿ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ, ಜೈವಿಕ ತರಕಾರಿ ವಿತರಣಾ ಕೇಂದ್ರ ಮೊದಲಾದವುಗಳನ್ನು ಸ್ಥಾಪಿಸಲು ತೀರ್ಮಾನ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಎಲ್ಲ ಕೃಷಿಕರನ್ನೂ ಸೇರ್ಪಡೆಗೊಳಿಸಿ ಸಮಗ್ರ ಜಲಾನಯನ ಕೃಷಿ ಅಭಿವೃದ್ಧಿ ಯೋಜನೆ, ಜಲಕ್ಷಾಮ ಪರಿಹಾರಕ್ಕೆ ಎಲ್ಲಾ ಮನೆಗಳಲ್ಲೂ ಮಳೆನೀರು ಶೇಖರಣೆ, ಬಾವಿ, ಕೊಳವೆ ಬಾವಿಯಲ್ಲಿ ನೀರು ಶೇಖರಿಸುವುದು, ತರಕಾರಿ ಕೃಷಿ ಮೊದಲಾದವುಗಳಿಗೆ ಪ್ರೋತ್ಸಾಹ ನೀಡಲಾಗುವುದು.
ಕಾಸರಗೋಡು ಗಿಡ್ಡ ತಳಿ ಪಶು ವಂಶದ ಉಳಿವಿಗಾಗಿ ಎಲ್ಲಾ ಮನೆ ಗಳಿಗೂ ಪಶು ಸಾಕಣೆಗೆ ಸಬ್ಸಿಡಿ, ಹಾಲು ಉತ್ಪಾದನೆ ವರ್ಧನೆಗೆ ಪ್ರೋತ್ಸಾಹ, ಬದಿಯಡ್ಕದ ಬೋಳುಕಟ್ಟೆಯಲ್ಲಿ ಕೋಳಿ ಮೊಟ್ಟೆ ಘಟಕ ಸ್ಥಾಪನೆ, ಪ್ಲಾಸ್ಟಿಕ್ ಮುಕ್ತ ಪಂಚಾಯತ್ಗಾಗಿ ಕುಟುಂಬಶ್ರೀ ಘಟಕಗಳ ಮುಖಾಂತರ ಪೇಪರ್ ಬ್ಯಾಗ್, ಹಾಳೆತಟ್ಟೆ, ಬಟ್ಟೆ ಚೀಲ ಮೊದಲಾದವುಗಳ ತಯಾರಿಕೆಗೆ ಸಬ್ಸಿಡಿ ಹಾಗೂ ಧನಸಹಾಯ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿಭಾಗಕ್ಕೆ ಸಂಪೂರ್ಣ ಕುಡಿಯುವ ನೀರಿನ ವ್ಯವಸ್ಥೆ, ಮನೆ, ಎಲ್ಲ ಕಾಲನಿಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗುವುದು.
ಮಾಲಿನ್ಯ ಸಂಸ್ಕರಣಾ ಸ್ಥಾವರ, ಪ್ರತಿ ತಿಂಗಳು ಮೆಡಿಕಲ್ ಕ್ಯಾಂಪ್ ಸಂಯೋಜನೆ, ಖಾಸಗಿ ವಲಯದ ಸಹಕಾರದೊಂದಿಗೆ ಬದಿಯಡ್ಕ ಪಂಚಾ ಯತ್ ಬಸ್ಸು ನಿಲ್ದಾಣ ನಿರ್ಮಿಸ ಲಾಗುವುದು. ವಿವಿಧ ಪ್ರದೇಶಗಳಲ್ಲಿ ಅಧುನಿಕ ಬಸ್ಸು ನಿಲ್ದಾಣ ಕೇಂದ್ರ ನಿರ್ಮಾಣ, ಎಲ್ಲ ರಸ್ತೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಅನ್ವರ್, ಶ್ಯಾಮಪ್ರಸಾದ್ ಮಾನ್ಯ, ಶಬಾನಾ, ಸದಸ್ಯರಾದ ಡಿ. ಶಂಕರ, ಬಾಲಕೃಷ್ಣ ಶೆಟ್ಟಿ, ಜಯಶ್ರೀ, ಮುನಿರ್, ಜಯಂತಿ, ವಿಶ್ವನಾಥ ಪ್ರಭು, ಲಕ್ಷಿ$¾àನಾರಾಯಣ ಪೈ, ಪುಷ್ಪಾ ಭಾಸ್ಕರನ್ ವಿವಿಧ ರಾಜಕೀಯ ಪಕ್ಷಗಳ ನೇತಾರರು, ವ್ಯಾಪಾರಿ ಅಧ್ಯಕ್ಷ ಎಸ್. ಎನ್. ಮಯ್ಯ ಮೊದಲಾದವರು ಭಾಗವಹಿಸಿದರು. ಪಂಚಾಯತ್ ಕಾರ್ಯದರ್ಶಿ ಸ್ವಾಗತಿಸಿದರು.
– ಕೃಷಿ ಹಾಗೂ ಇತರ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಬಜೆಟ್.
: ಕೆ.ಎನ್. ಕೃಷ್ಣ ಭಟ್ (ಪಂ. ಅಧ್ಯಕ್ಷರು)
– ಗೊತ್ತುಗುರಿಯಿಲ್ಲದ, ದೂರದೃಷ್ಟಿಯಿಲ್ಲದ ಬಜೆಟ್. ಜನರಿಂದ ವಾರ್ಷಿಕವಾಗಿ 1 ಕೋಟಿಗಿಂತಲೂ ಅಧಿಕ ವರಮಾನವನ್ನು ಪಡೆದುಕೊಂಡು ಜನತೆಗೆ ಪಂಚಾಯತ್ ನೀಡಿದ್ದು ಶೂನ್ಯವಾಗಿದೆ. ಕಳೆದ ವರ್ಷದ ಬಜೆಟ್ ಪುನರಾವರ್ತನೆಯಾಗಿದೆ. ಪ್ರತೀ ವರ್ಷ ಕೆಲವೊಂದು ಗ್ರಾಮೀಣ ವಾರ್ಡುಗಳನ್ನು ದತ್ತು ಸ್ವೀಕರಿಸಿ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಬೇಕಾಗಿತ್ತು.
: ಬಾಲಕೃಷ್ಣ ಶೆಟ್ಟಿ (ಪಂ. ಸದಸ್ಯರು)
– ಕಳೆದ ಬಾರಿಗಿಂತ ಈ ಸಲದ ಬಜೆಟಿನ ಯೋಜನಾ ಗಾತ್ರ ಕಡಿಮೆಯಾಗಿದೆ. ಇದರಿಂದಾಗಿ ಮುಂದೊಂದು ದಿನ ಇನ್ನೊಂದು ಬಜೆಟ್ ಮಂಡಿಸಬೇಕಾಗಿ ಬರಬಹುದು. ಮೀಸಲಿರಿಸಿದ ಮೊತ್ತವನ್ನು ಸಮರ್ಪಕವಾದ ರೀತಿಯಲ್ಲಿ ಅನುಷ್ಠಾನಗೊಳಿಸ ಬೇಕಾದ ಕರ್ತವ್ಯವೂ ಇದೆ.
: ಶಂಕರ ಡಿ. (ಪಂ. ಸದಸ್ಯರು)
– 2017-18 ವರ್ಷದ ಬದಿಯಡ್ಕ ಗ್ರಾಮ ಪಂಚಾಯತ್ ಬಜೆಟಿನಲ್ಲಿ ಕೃಷಿ, ಜಲಸಂಕ್ಷಣೆ, ಕುಡಿಯುವ ನೀರು, ಮಣ್ಣು ಸಂರಕ್ಷಣೆಗೆ ಆದ್ಯತೆ ನೀಡಿರುವುದು ಕೃಷಿ ಸಂಸ್ಕಾರದ ಮಣ್ಣಿನ ಮಕ್ಕಳಿಗೆ ಸಂದ ಮಾನ್ಯತೆಯಾಗಿದೆ.
: ಎಂ.ಎಚ್. ಜನಾರ್ದನ