ಶೃಂಗೇರಿ ಶ್ರೀ ಮಧೂರು ಕ್ಷೇತ್ರಕ್ಕೆ ಆಗಮನ
Team Udayavani, Mar 7, 2020, 5:43 AM IST
ಕಾಸರಗೋಡು: “ವಿಜಯ ಯಾತ್ರೆ’ ಅಂಗವಾಗಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಪಾದರು ಶುಕ್ರವಾರ ಸಂಜೆ ಮಧೂರಿಗೆ ಆಗಮಿಸಿದರು.
ಉಡುಪಿಯಿಂದ ಹೊರಟು ಸಂಜೆ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಆ ಬಳಿಕ ಅಣಂಗೂರಿನ ಶ್ರೀ ಶಾರದಾಂಬಾ ಭಜನಾ ಮಂದಿರದ ಮುಂಭಾಗದಲ್ಲಿ ಸ್ಥಾಪಿಸಿದ ಶಾಶ್ವತ ಚಪ್ಪರವನ್ನು ಲೋಕಾರ್ಪಣೆಗೈದು ಮಧೂರಿಗೆ ತೆರಳಿದರು.
ಮಧೂರು ಶ್ರೀ ಕ್ಷೇತ್ರದಲ್ಲಿ ಧೂಳಿ ಪಾದಪೂಜೆ, ದರ್ಶನ, ಸತ್ಸಂಗ, ಪಾದಪೂಜೆಯ ಬಳಿಕ ಶ್ರೀಪಾದರು ಆಶೀರ್ವಚನ ನೀಡಿದರು.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ರತನ್ ಕುಮಾರ್ ಕಾಮಡ ಅವರ ಮಾರ್ಗದರ್ಶನದಲ್ಲಿ ದೇವಸ್ವಂ ಮಂಡಳಿ ಆಯುಕ್ತ ಮುರಳಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಾಬು, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಉಪಾಧ್ಯಕ್ಷ ಬಿ.ಎಸ್.ರಾವ್, ಕೋಶಾಧಿಕಾರಿ ಮಂಜುನಾಥ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.