ರಕ್ತ ಕ್ಯಾನ್ಸರ್ನಿಂದ ನರಳುತ್ತಿರುವ ಸುಧೀಶ್ಗೆ ಸಹಾಯ ಮಾಡಬಲ್ಲಿರಾ?
Team Udayavani, May 11, 2018, 6:00 AM IST
ಬದಿಯಡ್ಕ: ಕುಟುಂಬದ ಆಸರೆಯಾಗಿದ್ದ ವಿವಾಹಿತ ಆಸ್ಪತ್ರೆ ಸೇರಿದ್ದಾನೆ. ಆರು ವರ್ಷಗಳ ಹಿಂದೆಯಷ್ಟೆ ಕೈಹಿಡಿದ ಮಡದಿ ಹಾಗೂ ನಾಲ್ಕು ವರ್ಷ ಪ್ರಾಯದ ಮಗಳು ವೈಗ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಆಧಾರ ಸ್ತಂಭವೇ ಕುಸಿದು ಬಿದ್ದು ದಿಕ್ಕು ತೋಚದ ಪರಿಸ್ಥಿತಿ.ಇದು ಮುಳ್ಳೇರಿಯಾದ ಸುಧೀಶ್ ಎಂಬ ಯುವಕನ ಮನೆಯ ಅವಸ್ಥೆ. ಕಾರಣ ರಕ್ತದ ಅರ್ಬುದ ಕಾಯಿಲೆ. ಕಳೆದ ಒಂದೂವರೆ ತಿಂಗಳಿಂದೀಚೆಗೆ ಇವರು ಹೋಗದ ಆಸ್ಪತ್ರೆಗಳಿಲ್ಲ. ಮಾಡದ ಮದ್ದಿಲ್ಲ. ಅದರೂ ಯಾವುದೇ ಫಲ ಕಾಣದಿರುವುದು ಕುಟುಂಬದ ಆತಂಕಕ್ಕೆ ಕಾರಣವಾಗಿದೆ.
ರೋಗ ಉಲ್ಬಣಿಸಿ ಹಾಸಿಗೆ ಹಿಡಿದಿರುವ ಸುಧೀಶ್ ಅನುಭವಿಸುವ ನೋವು ಹಾಗೂ ಸಂಕಟ ಅಷ್ಟಿಷ್ಟಲ್ಲ. ನೂರಾರು ಕನಸುಗಳೊಂದಿಗೆ ಬದುಕು ಕಟ್ಟಿ ಜೀವನ ನಿಜಾರ್ಥವನ್ನು ಅನುಭವಿಸುವ ಮೊದಲೇ ವಿಧಿಯ ವಕ್ರನೋಟಕ್ಕೆ ಬಲಿಯಾಗಿ ಬದುಕೇ ದುರಂತವಾಗಿ ನರಳುವ ಈತನ ಕಣ್ಣೀರು ಎಂತಹ ಕಲ್ಲು ಹೃದಯವನ್ನು ಕರಗಿಸಬಲ್ಲದು. ಕ್ಯಾನ್ಸರ್ ಎಂಬ ಮಹಾಮಾರಿ ತಂದಿತ್ತ ನೋವು ಸಂಕಟ ಸುಧೀಶ್ (36) ವಿವಾಹಿತನನ್ನು ಹಾಸಿಗೆ ಹಿಡಿಯುವಂತೆ ಮಾಡಿದೆ.
ಆರು ವರ್ಷದ ಹಿಂದೆಯಷ್ಟೇ ಜಿಷಾಳನ್ನು ವರಿಸಿದ ಸುಧೀಶ್ ನಾಲ್ಕು ವರ್ಷದ ಮಗಳು ವೈಗಾಳೊಂದಿಗೆ ದಿಕ್ಕೆಟ್ಟು ಕಂಬನಿಯಲ್ಲೇ ಕೈತೋಳೆಯುತ್ತಿದ್ದಾರೆ. ರಕ್ತ ಅರ್ಬುದ ರೋಗ ಬಾಧಿಸಿ ತಿಂಗಳುಗಳು ಕಳೆದವು. ಕಳೆದೆರಡು ತಿಂಗಳುಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮುಳ್ಳೇರಿಯಾ ಆಲಂತೋಡಿನ ಸುಧೀಶ್ ಕುಮರ್. ಎದ್ದು ನಡೆಯಲಾಗದ ಸ್ಥಿತಿಗೆ ತಲುಪಿರುವ ಸ್ಥಿತಿಯಲ್ಲಿ ಅತೀವ ನೋವಿನಿಂದ ನರಳುತ್ತಿರುವ ಸುಧೀಶ್ಗೆ ಸರ್ಜರಿಯ ಅಗತ್ಯವಿದ್ದು ಅದಕ್ಕಾಗಿ ಸುಮಾರು ಅಂದಾಜು 50 ಲಕ್ಷ ರೂಪಾಯಿಯ ಅಗತ್ಯವಿದೆ.
ಈಗಾಗಲೇ ಪ್ರತಿದಿನ 26,000ದ ಇಂಜಕ್ಷನ್ ಸೇರಿ ಸುಮಾರು 35,000ದಿನ ಒಂದಕ್ಕೆ ಖರ್ಚಾಗುತ್ತಿದ್ದು ಚಿಕಿತ್ಸೆಗೆ ಬೇಕಾದ ಮೊತ್ತವನ್ನು ಹೊಂದಿಸುವುದು ಇವರಿಗೊಂದು ಸವಾಲಾಗಿ ಪರಿಣಮಿಸಿದೆ. ಸುಧೀಶ್ನ ತಂದೆ ಕುಂಞಿರಾಮನ್ ಓರ್ವ ಕೃಷಿಕರಾಗಿದ್ದು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಈಗ ಭಾರವಾದ ಮನಸಿನೊಂದಿಗೆ ಸಹಾಯಕ್ಕಾಗಿ ಸಂಬಂಧಿಕರ,ಪರಿಚಿತರ ಮನೆ ಬಾಗಿಲು ತಟ್ಟಿ ಕಂಗಾಲಾಗಿದ್ದಾರೆ. ಕಾಲೇಜು ಉದ್ಯೋಗಿಗಳು ಒಟ್ಟಾಗಿ ಸುಮಾರು 2 ಲಕ್ಷ ರೂ. ಸಂಗ್ರಹಿಸಿ ನೀಡಿದ್ದಾರೆ. ರಾಜಕೀಯ ಮುಂದಾಳುಗಳು ಹಾಗೂ ಊರ ಹಿತೈಷಿಗಳು ಈಗಾಗಲೇ ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದು ಅದಕ್ಕಾಗಿ ಸಮಿತಿಯನ್ನು ರಚಿಸಲು ತೀರ್ಮಾನಿಸಿದ್ದಾರೆ. ಸುಧೀಶ್ ನ ಜೀವದ ರಕ್ಷಣೆಗಾಗಿ, ಅವಲಂಬಿಸಿರುವ ಹೆಂಡತಿ ಮಗಳ ಕಣ್ಣೀರು ಒರೆಸುವ ಕೈಗಳ ಅಗತ್ಯವಿದೆ.
ಸಹೃದಯಿ ಬಾಂಧವರು ನೆರವು ನೀಡಲು ಸಹಾಯಕವಾಗುವಂತೆ ಕೇರಳ ಗ್ರಾಮೀಣ ಬ್ಯಾಂಕ್ ಮುಳ್ಳೇರಿಯ ಶಾಖೆಯಲ್ಲಿ ಖಾತೆ(ಎಕೌಂಟ್)ತೆರೆಯಲಾಗಿದ್ದು ಹೃದಯವಂತರ ನೆರವು ಈ ಯುವಕ ಹಾಗೂ ಕುಟುಂಬಕ್ಕೆ ಮರುಜೀವ ನೀಡಬಹುದೆಂಬ ನಿರೀಕ್ಷೆಯನ್ನು ಚಿಕಿತ್ಸಾ ಸಮಿತಿಯು ಹೊಂದಿದೆ. ಕಾರಡ್ಕ ಬ್ಲೋಕ್ ಪಂಚಾಯತ್ ಸದಸ್ಯರಾದ ವಾರಿಜಾಕ್ಷನ್ ಅವರು ಚಿಕಿತ್ಸಾ ಸಮಿತಿ ಅಧ್ಯಕ್ಷರಾಗಿಯೂ, ಕಾರಡ್ಕ ಗ್ರಾಮ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ. ಜನನಿ ಕಾರ್ಯದರ್ಶಿ ಹಾಗೂ ನಾಸರ್ ಆದೂರು ಖಜಾಂಚಿಯಾಗಿದ್ದು ಹಲವಾರು ಸಹೃದಯ ಸದಸ್ಯರನ್ನು ಒಳಗೊಂಡಿದ್ದು ಸುಧೀಶ್ನ ಚಿಕಿತ್ಸಾ ನೆರವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಇವರೊಂದಿಗೆ ಕೈ ಜೋಡಿಸಲು ಮುಂದಾಗುವ ಹೃದಯವಂತರು ಇಲ್ಲಿ ನೀಡಲಾಗಿರುವ ಖಾತೆಗೆ ತಮ್ಮ ಸಹಾಯಧನವನ್ನು ವರ್ಗಾಯಿಸಬಹುದಾಗಿದೆ.
ಬ್ಯಾಂಕ್: ಕೇರಳ ಗ್ರಾಮೀಣ ಬ್ಯಾಂಕ್
ಖಾತೆ ಸಂಖ್ಯೆ 40596101055830
ಐ.ಎಫ್.ಎಸ್.ಸಿ. (IFSC) ಕೋಡ್ KLGB0040596
ದೂರವಾಣಿ ಸಂಖ್ಯೆ: 9447449951,9895127691