ಹಾವೇರಿಯಲ್ಲಿ ಕಾರು-ಬಸ್ ಢಿಕ್ಕಿ : ಕಾಸರಗೋಡಿನ ಮೂವರ ಸಾವು
Team Udayavani, Dec 28, 2022, 7:09 PM IST
ಕಾಸರಗೋಡು: ಕರ್ನಾಟಕದ ಹಾವೇರಿಯಲ್ಲಿ ಕಾರು ಮತ್ತು ಕರ್ನಾಟಕ ಆರ್.ಟಿ.ಸಿ. ಬಸ್ ಢಿಕ್ಕಿ ಹೊಡೆದು ಕಾಸರಗೋಡು ತಳಂಗರೆಯ ದಂಪತಿ ಹಾಗು ಅವರ ಮೊಮ್ಮಗ ಸಾವಿಗೀಡಾಗಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ತಳಂಗರೆ ನುಸ್ರತ್ ನಗರದ ಮೊಹಮ್ಮದ್ ಕುಂಞಿ(65), ಅವರ ಪತ್ನಿ ಆಯಿಷ(62) ಮತ್ತು ಇವರ ಪುತ್ರ ಸಿಯಾದ್ ಅವರ ಪುತ್ರ ಮೊಹಮ್ಮದ್(3) ಸಾವಿಗೀಡಾದರು. ಅಪಘಾತದಲ್ಲಿ ಮೊಹಮ್ಮದ್ ಕುಂಞಿ ಅವರ ಪುತ್ರ ಸಿಯಾದ್, ಅವರ ಪತ್ನಿ,ಪುತ್ರಿ ಆಯಿಷಾ ಗಂಭೀರ ಗಾಯಗೊಂಡಿದ್ದು ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿ.27 ರಂದು ಮಧ್ಯಾಹ್ನ ಎರಡು ಗಂಟೆಗೆ ಕರ್ನಾಟಕ ಹನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿದ್ದವರು ತೀರ್ಥಾಟನೆಗಾಗಿ ಕಾಸರಗೋಡಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ಸು ಕಾರಿಗೆ ಢಿಕ್ಕಿ ಹೊಡೆಯಿತು.
ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸ್ಥಳೀಯರು ಕಾರಿನಲ್ಲಿ ಸಿಲುಕಿಕೊಂಡವರನ್ನು ಕಾರಿನ ಬಾಗಿಲನ್ನು ಒಡೆದು ತೆಗೆದು ತತ್ಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದ್ದರೂ ಮೊಹಮ್ಮದ್ ಕುಂಞಿ ಮತ್ತು ಆಯಿಷಾ ಸಾವಿಗೀಡಾದರು. ಗಂಭೀರವಾಗಿ ಗಾಯಗೊಂಡಿದ್ದ ಮೊಮ್ಮಗ ಮೊಹಮ್ಮದ್ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದನು.
ಈ ಅಪಘಾತದಲ್ಲಿ ಸಾವನ್ನಪ್ಪಿದ ಮೊಹಮ್ಮದ್ ಕುಂಞಿ-ಆಯಿಷಾ ದಂಪತಿ ಪುತ್ರರಲ್ಲೋರ್ವನಾದ ಸೈನುಲ್ ಅಬೀದ್ ಅವರನ್ನು 2014 ರಲ್ಲಿ ಕಾಸರಗೋಡು ನಗರದ ಎಂ.ಜಿ.ರಸ್ತೆಯ ಪೀಠೊಪಕರಣ ಅಂಗಡಿಯಲ್ಲಿ ತಂಡವೊಂದು ಇರಿದು ಕೊಲೆಗೈದಿತ್ತು.