“ಕಾನೂನು ಉಲ್ಲಂಘನೆ ನಿಯಂತ್ರಿಸಲು ಸಹಕಾರಿ’
ಮೊಬೈಲ್ ಅದಾಲತ್ಗೆ ಚಾಲನೆ
Team Udayavani, May 18, 2019, 6:10 AM IST
ಕಾಸರಗೋಡು: ಆರ್ಥಿಕ ಅಡಚಣೆ ಮತ್ತು ಅನುಭವದ ಕೊರತೆ ಕಾರಣಗಳಿಂದ ಕಾನೂನು ಭಂಜನೆಯನ್ನು ನಿಯಂತ್ರಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಮೊಬೈಲ್ ಅದಾಲತ್ಗೆ ಗುರುವಾರ ಚಾಲನೆ ನೀಡಲಾಯಿತು. ಕಾನೂನು ಸೇವೆಗಳು ಮನೆಯಂಗಳಕ್ಕೆ ಎಂಬ ಆಶಯದೊಂದಿಗೆ ಈ ಮಹತ್ತರ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯ ಕಾನೂನು ಸೇವೆಗಳ ಅಥೋರಿಟಿ ಈ ಯೋಜನೆಯ ರೂಪುರೇಖೆ ಸಿದ್ಧಪಡಿಸಿ ಜಾರಿಗೊಳಿಸುತ್ತಿದೆ.
ಗುರುವಾರ ಜಿಲ್ಲಾ ಪ್ರಧಾನ ನ್ಯಾಯಾಲಯದ ಪರಿಸರದಲ್ಲಿ ಚಾಲನೆಗೊಂಡ ಜಿಲ್ಲಾ ಮಟ್ಟದ ಮೊಬೈಲ್ ಅದಾಲತ್ ವಾಹನಕ್ಕೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಮನೋಹರ ಎಸ್.ಕಿಣಿ ಪತಾಕೆ ಬೀಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಕಾನೂನು ಸೇವೆಗಳು ಭಾರೀ ವೆಚ್ಚದಾಯಕವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಖಚಿತವಾದ ನ್ಯಾಯ ದೊರಕಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಮುನ್ನಡೆಸಲಿರುವ ಇಂತಹ ಯೋಜನೆ ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪ ನ್ಯಾಯಾಧೀಶ ವಿ.ಟಿ.ಪ್ರಕಾಶನ್, ಅಥೋರಿಟಿಯ ಕಾರ್ಯಕಾರೀ ಸದಸ್ಯ, ಜಿಲ್ಲಾ ಪೊಲೀಸ್ ವರಿಷ್ಠ ಜೇಮ್ಸ್ ಜೋಸೆಫ್, ಜಿಲ್ಲಾ ಕಾನೂನು ಅಧಿಕಾರಿ ಕೆ.ವಿ.ಉಣ್ಣಿಕೃಷ್ಣನ್, ನ್ಯಾಯಾಲಯದ ಸಿಬಂದಿು, ನ್ಯಾಯಾಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಮೇ 30ರ ವರೆಗೆ ಸಂಚಾರ
ಜಿಲ್ಲೆಯಾದ್ಯಂತ ಮೇ 30ರ ವರೆಗೆ ಮೊಬೈಲ್ ಅದಾಲತ್ ವಾಹನ ಸಂಚರಿಸಲಿದೆ. ಅಪರಾಧ ದೂರುಗಳನ್ನು ಹೊರತು ಪಡಿಸಿ ಮಿಕ್ಕುಳಿದ ಇತರ ನಾಗರಿಕ ದೂರುಗಳಗೆ ಈ ಮೊಬೈಲ್ ಅದಾಲತ್ ಮೂಲಕ ತತ್ಕ್ಷಣ ನ್ಯಾಯದೊರಕಿಸುವ ಉದ್ದೇಶ ಹೊಂದಿದೆ.