ಸಹ ಪ್ರಯಾಣಿಕರನ್ನು ನಿಗಾದಲ್ಲಿರಿಸಲು ದ.ಕ. ಜಿಲ್ಲಾಡಳಿತ ಸೂಚನೆ
ಕಾಸರಗೋಡಿನ ಯುವಕನಲ್ಲಿ ಕೊರೊನಾ ಪತ್ತೆ ಹಿನ್ನೆಲೆ
Team Udayavani, Mar 18, 2020, 12:45 AM IST
ಮಂಗಳೂರು: ದುಬಾೖಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡಿನ ಯುವಕನಲ್ಲಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರನ್ನು ಪತ್ತೆ ಮಾಡಿ ಮನೆಯಲ್ಲಿಯೇ ನಿಗಾದಲ್ಲಿಡಲು ಮತ್ತು ಅವರ ಮನೆಗೆ ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ದ.ಕ. ಜಿಲ್ಲಾಡಳಿತವು ಆರೋಗ್ಯ ಇಲಾಖೆಗೆ ಸೂಚಿಸಿದೆ.
ಯುವಕ ಓಡಾಡಿದ ಮಾರ್ಗಸೂಚಿಯನ್ನು ಕಾಸರಗೋಡು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಮಾ. 14ರಂದು ಬೆಳಗ್ಗೆ 5.20ಕ್ಕೆ ಮಂಗಳೂರಿಗೆ ಬಂದ ಬಳಿಕ ಇಬ್ಬರು ಸಂಬಂಧಿಕರೊಂದಿಗೆ ಅವರು ಕಾಸರಗೋಡಿಗೆ ತೆರಳಿದ್ದಾರೆ. ಅಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಆತನನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. 8 ಗಂಟೆಗೆ ನಾಲ್ವರೂ ಕೂಡ ಇನ್ನೊಂದು ಖಾಸಗಿ ಆಸ್ಪತ್ರೆಯ ಕ್ಯಾಂಟಿನ್ಗೆ ತೆರಳಿ ಚಹಾ ಸೇವಿಸಿದ್ದಾರೆ. ಬಳಿಕ ಪರೀಕ್ಷೆಗೆ ಗಂಟಲು ಸ್ರಾವ ಮಾದರಿ ನೀಡಲು ಸರಕಾರಿ ಆಸ್ಪತ್ರೆಗೆ ತೆರಳಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ಕಾಸರಗೋಡಿನ ಬೇವಿಂಜೆಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿ ರೋಗಿ ಮೂರು ದಿನ ಕಾಲ ನಿಗಾದಲ್ಲಿದ್ದ. ಸೋಮವಾರ ರಾತ್ರಿ ಬಂದ ವೈದ್ಯಕೀಯ ಪರೀಕ್ಷೆಯಲ್ಲಿ ಆತನಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಯುವಕನನ್ನು ಕಾಸರಗೋಡು ಆಸ್ಪತ್ರೆಯ ವಿಶೇಷ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆ ವ್ಯಕ್ತಿ ಬಂದ ವಿಮಾನದಲ್ಲಿ ಎಷ್ಟು ಮಂದಿಯಿದ್ದರು ಹಾಗೂ ಆ ಪೈಕಿ ದ.ಕ. ಸೇರಿದಂತೆ ಕರ್ನಾಟಕ ರಾಜ್ಯದ ಎಷ್ಟು ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿಯನ್ನು ಕಲೆಹಾಕುವ ಕಾರ್ಯದಲ್ಲಿ ದ.ಕ. ಜಿಲ್ಲಾಡಳಿತ ನಿರತವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಮಾಹಿತಿ ಸಂಗ್ರಹ: ಶ್ರೀರಾಮುಲು
ಕಾಸರಗೋಡಿನ ಯುವಕನಲ್ಲಿ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತ ಓಡಾಟ ನಡೆಸಿರುವ ಮಾಹಿತಿಯನ್ನು ಪಡೆಯಲಾಗುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಿ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.