ದಿನವೊಂದಕ್ಕೆ 55 ವಾರ್ಡ್ಗಳಲ್ಲಿ 4,125 ಮಂದಿಗೆ ಕೋವಿಡ್ ತಪಾಸಣೆ
Team Udayavani, Jun 11, 2021, 5:40 AM IST
ಕಾಸರಗೋಡು: ದಿನವೊಂದಕ್ಕೆ 55 ವಾರ್ಡ್ಗಳಲ್ಲಿ 4,125 ಮಂದಿಗೆ ಕೋವಿಡ್ ತಪಾಸಣೆ ನಡೆ ಸಲಾಗುವುದು. ಈ ನಿಟ್ಟಿನಲ್ಲಿ ವಾರ್ಡ್ ಒಂದರಲ್ಲಿ 75 ಮಂದಿಯ ತಪಾಸಣೆ ನಡೆಯಲಿದೆ. ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.
ಕಾಸರಗೋಡು ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿ ಕಾರಿ ಡಾ| ಡಿ. ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಅಧಿಕ ಪ್ರಮಾಣ ದಲ್ಲಿ ಸೋಂಕು ಬಾಧಿತರು ಇರುವ ಪ್ರದೇಶಗಳನ್ನು ಪತ್ತೆಮಾಡಿ ಹೆಚ್ಚುವರಿ ಕಟ್ಟುನಿಟ್ಟುಗಳನ್ನು ಆಯಾ ತಾಣಗಳಲ್ಲೇ ನಿಗದಿ ಪಡಿಸುವ ನಿಟ್ಟಿನಲ್ಲಿ ಸ್ಟ್ರಾಂಗ್ ಮಲ್ಟಿ ಸ್ಟೇಜ್ ರಾಂಡಂ ಸಾಂಪ್ಲಿಂಗ್ ನಡೆಸಲಾಗುವುದು. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಪಾಸಣೆ ಕ್ರಮ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ವ್ಯಾಕ್ಸಿನೇಶನ್ ವಿಸ್ತೃತಗೊಳಿಸುವಂತೆ ಸಭೆ ಆದೇಶಿಸಿದೆ. ಜಿಲ್ಲೆಯ ವಯೋ ವೃದ್ಧ ಕೇಂದ್ರಗಳಲ್ಲಿ ಬುಧವಾರ ಪೂರ್ಣ
ಗೊಂಡಿದೆ. ಅಂಗವಿಕಲರು, ಹಾಸಿಗೆ ಹಿಡಿದಿರುವ ರೋಗಿಗಳು, ಶುಶ್ರೂಷೆ ಪಡೆಯುತ್ತಿರುವ ರೋಗಿಗಳು ಮೊದಲಾದ ವರಿಗೆ ಅವರ ಮನೆ ಗಳಿಗೇ ತೆರಳಿ ವ್ಯಾಕ್ಸಿನ್ ನೀಡಲು ಉದ್ದೇಶಿಸಲಾಗಿದೆ ಎಂದರು.
ಕೋವಿಡ್ 3ನೇ ಅಲೆ ತಡೆಯಲು ಸಿದ್ಧತೆ :
ಕೋವಿಡ್ ಮೂರನೇ ಅಲೆಯ ಅವಧಿ ಯಲ್ಲಿ ಮಕ್ಕಳಿಗೆ ಹೆಚ್ಚು ಕಾಡಲಿದೆ ಎಂದು ಆರೋಗ್ಯ ಪರಿಣತರು ಅಭಿಪ್ರಾಯ ಪಟ್ಟಿರುವ ಕಾರಣ ಕಾಂಞಂಗಾಡಿನ ಅಮ್ಮ ಮತ್ತು ಮಗು ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ಸಜ್ಜುಗೊಳಿಸಲು ಆದೇಶ ನೀಡಲಾಗಿದೆ. ಶಿಶುರೋಗ ಪರಿಣತರ ಸೇವೆ ಖಚಿತಪಡಿಸಬೇಕಿದೆ. ಜಿಲ್ಲಾ ಆಸ್ಪತ್ರೆ, ಟಾಟಾ ಆಸ್ಪತ್ರೆ, ಕಾಸರಗೊಡು ಸರಕಾರಿ ಮೆಡಿಕಲ್ ಕಾಲೇಜು, ಜನರಲ್ ಆಸ್ಪತ್ರೆ ಇತ್ಯಾದಿ ಕಡೆ ಅಗತ್ಯ ವ್ಯವಸ್ಥೆ ನಡೆಸಲಾಗುವುದು. ಮಂಗಲ್ಪಾಡಿ ತಾ| ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ಲೈನ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಕರಾವಳಿ, ಆದಿವಾಸಿ ವಲಯಗಳಲ್ಲಿ, ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಸ್ಪೆಷ್ಯಲ್ ಡ್ರೈವ್ ನಡೆಸಲಾಗುವುದು. ಜಿಲ್ಲೆಯ ಕೆಲವು ಕಾಲನಿಗಳಲ್ಲಿ ಕೋವಿಡ್ ಹೆಚ್ಚಳಗೊ ಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ನಡೆಸಲು ವಿಶೇಷ ಗಮನಹರಿ ಸಬೇಕು ಎಂದು ಸಭೆ ಆದೇಶಿಸಿದೆ ಎಂದರು.
ಕೇರಳ-ಕರ್ನಾಟಕ ಗಡಿ ಪ್ರದೇಶ ಗಳಲ್ಲಿ ಮದ್ಯ ಅಕ್ರಮ ಮಾರಾಟ ಅಧಿಕ ಗೊಳ್ಳುತ್ತಿರುವ ವರದಿಗಳಿದ್ದು, ಅಂಥಾ ಪ್ರದೇಶಗಳಿಗೆ ಅಬಕಾರಿ ದಳ ದಾಳಿ ನಡೆಸಬೇಕು. ಉಭಯ ರಾಜ್ಯಗಳ ಅಬಕಾರಿ ದಳಗಳು ಜಂಟಿ ತಪಾಸಣೆ ನಡೆಸಲೂ ಆದೇಶಿಸಲಾಗಿದೆ ಎಂದರು.
ಕಡ್ಡಾಯ ತಪಾಸಣೆ : 8 ಆರೋಗ್ಯ ಬ್ಲಾಕ್ಗಳಲ್ಲಿ 777 ವಾರ್ಡ್ಗಳಿವೆ. ದಿನವೊಂದಕ್ಕೆ 55 ವಾರ್ಡ್ಗಳಲ್ಲಿ 4,125 ಮಂದಿಯ ತಪಾಸಣೆ ನಡೆಯಲಿದೆ. 14 ದಿನ ಕಳೆದು ಮತ್ತೆ ಕೋವಿಡ್ ತಪಾಸಣೆ ನಡೆಸಬೇಕಿದೆ. ಪೊಲೀಸರು, ಆಟೋರಿಕ್ಷಾ ಚಾಲಕರು, ಬಸ್ ಸಿಬಂದಿ, ಅಂಗಡಿ ಮಾಲಕರು, ಅಂಗಡಿ, ಕಾರ್ಖಾನೆ, ವ್ಯಾಪಾರ ಸಂಸ್ಥೆಗಳ ನೌಕರರು, ಸರಕಾರಿ ಸಿಬಂದಿ ಸಹಿತ ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಈ ನಿಟ್ಟಿನಲ್ಲಿ ಕಡ್ಡಾಯ ತಪಾಸಣೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಹಕಾರ ಲಭ್ಯತೆ ನಿಟ್ಟಿನಲ್ಲಿ ಗ್ರಾ.ಪಂ. ಅಧ್ಯಕ್ಷರ, ಕಾರ್ಯಕರ್ತರ ಸಭೆ ತುರ್ತಾಗಿ ನಡೆಸುವಂತೆ ಪಂಚಾಯತ್ ಡೆಪ್ಯೂಟಿ ನಿರ್ದೇಶಕರಿಗೆ ಆದೇಶ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.
ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಎ.ಎಸ್.ಪಿ. ಪ್ರಜೀಷ್ ತೋಟತ್ತಿಲ್, ಡಾ| ಕೆ.ಆರ್.ರಾಜನ್, ಡಾ| ಎ.ವಿ. ರಾಮದಾಸ್ ಉಪಸ್ಥಿತರಿದ್ದರು.