ಮಂಜೇಶ್ವರ, ಉದುಮದಲ್ಲಿ ಸಿಪಿಎಂ-ಮುಸ್ಲಿಂ ಲೀಗ್ ರಹಸ್ಯ ಒಪ್ಪಂದ : ಕೆ.ಸುರೇಂದ್ರನ್
ಕಾಂಞಂಗಾಡ್ ನಿವಾಸಿಯನ್ನು ಎಡರಂಗದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ
Team Udayavani, Mar 31, 2021, 4:08 PM IST
ಕಾಸರಗೋಡು: ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸುವ ಉದ್ದೇಶದಿಂದ ಮಂಜೇಶ್ವರ ಮತ್ತು ಉದುಮದಲ್ಲಿ ಸಿಪಿಎಂ-ಮುಸ್ಲಿಂ ಲೀಗ್ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.
ಕಾಸರಗೋಡು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಪಿಎಂ-ಮುಸ್ಲಿಂ ಲೀಗ್ ಹಾಲು-ಸಕ್ಕರೆಯಂತೆ ಸಂಬಂಧವನ್ನು ಹೊಂದಿದೆ. ಉದುಮದಲ್ಲಿ ಸಿಪಿಎಂ ಅಭ್ಯರ್ಥಿಗೆ ಮುಸ್ಲಿಂ ಲೀಗ್, ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಗೆ ಸಿಪಿಎಂ ಪರಸ್ಪರ ನೆರವಾಗುವಂತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಈ ಕಾರಣದಿಂದಲೇ ಮಂಜೇಶ್ವರದಲ್ಲಿ ಸಮರ್ಥರೂ, ಸ್ಥಳೀಯರೂ ಆದ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದರೂ ಕೊನೆಯ ಹಂತದಲ್ಲಿ ಅವರನ್ನು ಬದಲಾಯಿಸಿ ಕಾಂಞಂಗಾಡ್ ನಿವಾಸಿಯನ್ನು ಎಡರಂಗದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಮಂಜೇಶ್ವರ ಹಾಗು ಕಾಸರಗೋಡಿನಲ್ಲಿ 3000 ಅವಳಿ ಮತಗಳಿವೆಯೆಂದು ಸುರೇಂದ್ರನ್ ಆರೋಪಿಸಿದ್ದಾರೆ. ಮಂಜೇಶ್ವರದ ಸೂಕ್ಷ್ಮ ಸಂವೇದಿ ಮತಗಟ್ಟೆಗಳಲ್ಲಿ ಕೇಂದ್ರ ಸೇನೆಯನ್ನು ನೇಮಿಸಬೇಕು, ಆ ಮೂಲಕ ಸ್ವತಂತ್ರ ಹಾಗು ನಿಷ್ಪಕ್ಷ ಚುನಾವಣೆ ನಡೆಸಬೇಕೆಂದೂ ಅವರು ಆಗ್ರಹಿಸಿದರು.
ಚಿನ್ನ, ಡಾಲರ್ ಸಾಗಾಟ ಪ್ರಕರಣದಲ್ಲೂ, ಆಳ ಸಮುದ್ರ ಮೀನುಗಾರಿಕೆ, ಸ್ಪಿಂಕ್ಲರ್ ವಿವಾದ, ಶಬರಿಮಲೆ ವಿಯಷದಲ್ಲೂ ಮುಖ್ಯಮಂತ್ರಿ, ಸಚಿವರು, ವಿಧಾನಸಭಾ ಸ್ಪೀಕರ್ ಶಾಮೀಲಾಗಿರುವುದಾಗಿ ಸಾಬೀತುಗೊಳ್ಳುತಿದೆ. ರಾಜ್ಯ ಸರಕಾರ ಭ್ರಷ್ಟಾಚಾರಿಗಳ, ದೇಶದ್ರೋಹಿಗಳ ಕಾವಲುಗಾರನಾಗಿ ಬದಲಾಗಿದೆಯೆಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಧಾಮ ಗೋಸಾಡ, ಹತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.