ಕುಂಬಳೆ: ಮಹಡಿಯಿಂದ ಬಿದ್ದು ಯುವಕ ಸಾವು
Team Udayavani, Jun 13, 2022, 1:34 AM IST
ಕುಂಬಳೆ: ಮಂಗಲ್ಪಾಡಿ ಪಂಚಾಯತ್ನ ಹೇರೂರು ಕಂಗ್ವೆ ನಿವಾಸಿ, ಹೇರೂರು ದಿ| ಐತ್ತಪ್ಪ ಶೆಟ್ಟಿ ಅವರ ಪುತ್ರ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸಂದೀಪ್ ಶೆಟ್ಟಿ (35) ಅವರು ಮಂಡೆಕಾಪು ಎಂಬಲ್ಲಿ ಮನೆಯೊಂದರ ಛಾವಣಿಗೆ ಶೀಟ್ ಹಾಕಲು ಅಳತೆ ತೆಗೆಯುತ್ತಿದ್ದಾಗ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ.
ಅವರು ಅವಿವಾಹಿತರಾಗಿದ್ದು ಸಹೋದರಿಯನ್ನು ಅಗಲಿದ್ದಾರೆ. ಸಂದೀಪ್ ಯುವ ಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷರಾಗಿದ್ದು, ಫ್ರೆಂಡ್ಸ್ ಹೇರೂರು ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಹೇರೂರು ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದರು.
ಅಂಗಡಿಯಿಂದ ನಗದು ಕಳವಿಗೆ ಯತ್ನ
ಸುಳ್ಯ: ಬೆಳ್ಳಾರೆಯ ಅಡಿಕೆ ಅಂಗಡಿಯಿಂದ ನಗದು ಕಳವಿಗೆ ಯತ್ನಿಸಿರುವ ಘಟನೆ ಜೂ. 10ರಂದು ನಡೆದಿದೆ.
ಮಧ್ಯಾಹ್ನದ ವೇಳೆಗೆ ಇಬ್ಬರು ಅಪರಿಚಿತರು ಕಾರಿನಲ್ಲಿ ಬಂದು ಕಾರನ್ನು ರಸ್ತೆ ಬದಿ ನಿಲ್ಲಿಸಿ ತನ್ನ ಕಾರಿನಲ್ಲಿ ಅಡಿಕೆ ಇದ್ದು ಅದನ್ನು ತರುವಂತೆ ಅಂಗಡಿಯವರಲ್ಲಿ ತಿಳಿಸಿದ್ದರು. ಆಗ ಅಂಗಡಿಯಲ್ಲಿ ಒಬ್ಬ ಕೆಲಸಗಾರ ಮಾತ್ರವೇ ಇದ್ದು, ಆತ ಕಾರಿನ ಬಳಿ ತೆರಳಿದ ವೇಳೆ ಅಪರಿಚಿತರು ಕ್ಯಾಶ್ ಡ್ರಾವರ್ ಮುರಿದಿದ್ದಾರೆ. ಆ ವೇಳೆ ಇನ್ನೊಬ್ಬ ಕೆಲಸಗಾರ ಬಂದಿದ್ದು, ಅಪರಿಚಿತ ಆತನಲ್ಲೂ ಗೋಣಿಚೀಲ ಬೇಕೆಂದು ಹೇಳಿ, ಒಮ್ಮೆ 10, ಮತ್ತೊಮ್ಮೆ 15 ಎಂದು ಹೇಳಿದ್ದು ಇದರಿಂದ ಅನುಮಾನಗೊಂಡ ಕೆಲಸಗಾರ ಇಲ್ಲ ಎಂದಾಗ ಅಪರಿಚಿತ ಅಲ್ಲಿಂದ ಹೋಗಿದ್ದಾನೆ. ಬಳಿಕ ಕೆಲಸಗಾರರು ಪರಿಶೀಲನೆ ಮಾಡುವ ವೇಳೆ ಕ್ಯಾಶ್ ಡ್ರಾವರ್ ಮುರಿದಿದ್ದು ಕಂಡುಬಂದಿದ್ದು, ನಗದು ಕಳವು ನಡೆದಿಲ್ಲ ಎಂದು ತಿಳಿದುಬಂದಿದೆ.
ಮಹಿಳೆಯ ಕುತ್ತಿಗೆಯಿಂದ ಚಿನ್ನ ಎಗರಿಸಿ ಕಳ್ಳ ಪರಾರಿ
ಸುಳ್ಯ: ಸೋಣಂಗೇರಿ ಸಮೀಪ ಮಹಿಳೆಯ ಕುತ್ತಿಗೆಯಿಂದ ಚಿನ್ನ ಎಗರಿಸಿ ಕಳ್ಳನೋರ್ವ ಪರಾರಿಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಣಂಗೇರಿ ಸುಳ್ಯ ರಸ್ತೆಯ ಹೊಸಗದ್ದೆ ಬಳಿ ಹರೀಶ್ ಅವರ ಪತ್ನಿ ನಿರ್ಮಿತಾ ಅವರು ಶುಕ್ರವಾರ ರಾತ್ರಿ ಮನೆಯ ಹಿಂಬದಿ ಶೌಚಾಲಯಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ಕುತ್ತಿಗೆ ಹಿಸುಕಿ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾನೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.