“ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು’
Team Udayavani, Jul 30, 2017, 9:20 AM IST
ಬದಿಯಡ್ಕ: ಶಿಸ್ತು ಹಾಗೂ ನಿಯಮಾವಳಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ರಾಜನಂತೆ ಮುನ್ನಡೆ ಯಬಹುದು ಎಂದು ಕೇರಳ ರಾಜ್ಯ ಚಿನ್ಮಯ ಮಿಶನ್ ಪ್ರಧಾನರಾದ ಶ್ರೀ ಸ್ವಾಮಿ ವಿಕ್ತಾನಂದ ಸರಸ್ವತೀ ನುಡಿದರು.
ಶನಿವಾರ ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ನಡೆದ ಚಿನ್ಮಯ ಚೆಸ್ ಚಾಂಪ್ಯನ್ಶಿಪ್ ಸೀಸನ್ 2ನ್ನು ದೀಪಬೆಳಗಿಸಿ ಉದ್ಘಾಟಿಸಿ ಚೆಸ್ ಆಟಕ್ಕೆ ಚಾಲನೆಯನ್ನು ನೀಡಿದರು. ಮನಸ್ಸನ್ನು ಯಾವಾಗಲೂ ನಮ್ಮ ಹತೋಟಿಯಲ್ಲಿಟ್ಟು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಅತೀ ಮುಖ್ಯ, ಮುಂದೊಂದು ದಿನ ಅದು ಗೆಲುವನ್ನು ತಂದುಕೊಡುತ್ತದೆ ಎಂದರು.
ಬದಿಯಡ್ಕ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜ್ಞಾನದೇವ ಶೆಣೈ, ಚೆಸ್ ತರಬೇತುದಾರರಾದ ಮನೋಜ್, ರಾಜೇಶ್, ಸುಕುಮಾರನ್, ಉಪ ಪ್ರಾಂಶುಪಾಲ ಸತೀಶ್ಚಂದ್ರನ್, ಚೆಸ್ ಕನ್ವೀನರ್ ಮಾನಸ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರಶಾಂತ್ ಬೆಳಿಂಜ ಸ್ವಾಗತಿಸಿದರು. ಅಧ್ಯಾಪಿಕೆ ನ್ಯಾನ್ಸಿ ಪ್ರಿಯಾ ಡಿ’ಸೋಜ ನಿರೂಪಣೆಗೈದರು.
ಕಣ್ಣೂರು, ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 35 ಶಾಲೆಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದರು. ಒಟ್ಟು ನಾಲ್ಕು ವಿಭಾಗಗಳಲ್ಲಾಗಿ ಸ್ಪರ್ಧೆಗಳು ನಡೆಯುತ್ತವೆ.