ಬತ್ತಿದ ಜೀವಸೆಲೆ; ಕುಡಿಯುವ ನೀರಿಗೆ ನಿಲ್ಲದ ಪರದಾಟ
Team Udayavani, Feb 20, 2019, 1:00 AM IST
ಕಾಪು: ಕಾಪು ತಾಲೂಕಿನ ಇನ್ನಂಜೆ ಮತ್ತು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬೇಸಗೆ ಬಂತೆಂದರೆ ಸಾಕು, ನೀರಿನ ಸಮಸ್ಯೆ ಶುರುವಾಗುತ್ತದೆ.
ಎಲ್ಲೆಲ್ಲಿ ಸಮಸ್ಯೆಗಳು ?
ಮಜೂರು ಗ್ರಾ.ಪಂ. ವ್ಯಾಪ್ತಿಯ ಪಾದೂರು ಮತ್ತು ಮಜೂರು ಗ್ರಾಮಗಳ ಮೂರು ಕಡೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಪಾದೂರು ಗ್ರಾಮದ ಕೂರಾಲು, ಕರಂದಾಡಿ ಶಾಲೆಯ ಬಳಿ, ಕರಂದಾಡಿ ಕಡ್ಸಲೆಬೆಟ್ಟು, ಮಜೂರು ರೈಲ್ವೇ ಬ್ರಿಡ್ಜ್ ಬಳಿಯ ಗರಡಿ ರಸ್ತೆ, ಮಜೂರು ಎಸ್ಸಿ ಕಾಲನಿಯ 100ಕ್ಕೂ ಅಧಿಕ ಕುಟುಂಬಗಳಿಗೆ ನೀರಿನ ಸಮಸ್ಯೆ ತೀವ್ರವಾಗಿದೆ.
ವರ್ಷಕ್ಕೆ 7-8 ಲಕ್ಷ ರೂ. ವ್ಯಯ
ಮಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂರಾಲು, ಕರಂದಾಡಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ನೀರಿನಾಶ್ರಯಕ್ಕಾಗಿ ಬೋರ್ವೆಲ್ ನಿರ್ಮಾಣ, ಬಾವಿ ಶುಚಿತ್ವ, ಪೈಪ್ಲೈನ್ ಅಳವಡಿಕೆ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜಿಗಾಗಿ ಪ್ರತೀ ವರ್ಷ 7ರಿಂದ 8 ಲಕ್ಷ ರೂ. ವ್ಯಯಿಸಲಾಗುತ್ತದೆ.
ಅಂತರ್ಜಲ ಕುಸಿತ
ಮಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ಅತಂರ್ಜಲ ಕುಸಿತವಾಗುತ್ತಿದೆ. ಪಂಜಿತ್ತೂರು, ಕರಂದಾಡಿ ಮತ್ತು ವಳದೂರಿನಲ್ಲಿ ಹರಿಯುವ ಹೊಳೆಗೆ ಅಡ್ಡಲಾಗಿ ಅಣೆಕಟ್ಟು ಹಾಕಿ ಅಂತರ್ಜಲ ವೃದ್ಧಿಗೆ ಗ್ರಾಮಸ್ಥರೇ ಪ್ರಯತ್ನ ನಡೆಸಿದ್ದಾರೆ. ಅದರೊಂದಿಗೆ ಉಳಿಯಾರು ಬಳಿ ಅಣೆಕಟ್ಟು ರಿಪೇರಿಗೆ ವಿಶೇಷ ಆದ್ಯತೆ ನೀಡಬೇಕಿದೆ.
ಇನ್ನಂಜೆ ಗ್ರಾಮ ಪಂಚಾಯತ್
ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಪಾಂಗಾಳ ಸದಾಡಿ, ಗಾಂಧಿ ನಗರ ಮತ್ತು ಸರಸ್ವತಿ ನಗರ, ಮಂಡೇಡಿ ಪರಿಸರದಲ್ಲಿ ನೀರಿನ ಸಮಸ್ಯೆ ಇದೆ. ಮಳೆ ವಿಳಂಬವಾದರೆ ಇನ್ನಂಜೆ – ಗೋಳಿಕಟ್ಟೆಯಲ್ಲೂ ಸಮಸ್ಯೆ ಉದ್ಭವವಾಗುತ್ತದೆ.
ನೀರಿನ ಯೋಜನೆಗೆ 6 ಲಕ್ಷ ರೂ.
ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಾವಿ ಕೊರೆಯುವಿಕೆ, ಶುಚಿತ್ವ, ಪಂಪ್ ಫಿಟ್ಟಿಂಗ್, ಮೋಟಾರ್ ಫಿಟ್ಟಿಂಗ್, ಪೈಪ್ಲೈನ್ ಅಳವಡಿಕೆ, ಪೈಪ್ಲೈನ್ ನಿರ್ವಹಣೆ, ಬೋರ್ವೆಲ್ ರಚನೆ ಇತ್ಯಾದಿ ಯೋಜನೆಗಳಿಗೆ ಪ್ರತೀ ವರ್ಷ 5ರಿಂದ 6 ಲಕ್ಷ ರೂ. ಖರ್ಚಾಗುತ್ತದೆ. ಪಾಂಗಾಳ ಸದಾಡಿ, ಗಾಂಧಿ ನಗರ, ಸರಸ್ವತಿ ನಗರ, ಮಂಡೇಡಿಗೆ ಕಳೆದ ವರ್ಷ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ. ಕಳೆದ ವರ್ಷ ಇದಕ್ಕಾಗಿ 87 ಸಾವಿರ ರೂ. ಖರ್ಚಾಗಿದೆ. ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿನ ಸರಕಾರಿ ಬಾವಿಗಳನ್ನು ಆಳಗೊಳಿಸಿ ಸಮಸ್ಯೆ ಪರಿಹಾರಕ್ಕೆ ಗ್ರಾ.ಪಂ. ಯೋಜನೆ ರೂಪಿಸಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ
ಮಜೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಪ್ರತೀ ವರ್ಷ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ವರ್ಷವೂ ಟಾಸ್ಕ್ಫೋರ್ಸ್ನಡಿ ಅಗತ್ಯ ಪ್ರದೇಶಗಳಿಗೆ ನೀರು ಪೂರೈಸಲಾಗುವುದು. ಪ್ರತ್ಯೇಕ 2 ಬೋರ್ವೆಲ್ ರಚನೆ ಮಾಡಲಾಗುತ್ತಿದೆ. ನಳ್ಳಿ ನೀರಿನ ಬಿಲ್ ಪಾವತಿಸದೆ ಇರುವವರಿಗೆ ನೋಟಿಸ್ ನೀಡಿ ನೀರಿನ ಸಂಪರ್ಕ ಕಟ್ ಮಾಡುವ ಎಚ್ಚರಿಕೆ ನೀಡಲಾಗುತ್ತಿದೆ. ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
– ಪ್ರತಾಪ್ಚಂದ್ರ ಶೆಟ್ಟಿ, ಪಿಡಿಒ, ಮಜೂರು ಗ್ರಾಮ ಪಂಚಾಯತ್
ಬೇಸಗೆಗೆ ಮೊದಲೇ ಬಾವಿ ನಿರ್ಮಾಣ
ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಪಾಂಗಾಳ ಪೆರಿಯ ಕೆರೆ ಬಳಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಜಿ.ಪಂ. ಅನುದಾನದಡಿ ಬಾವಿ ರಚನೆಗೆ ಹಣ ಬಿಡುಗಡೆಯಾಗಿದೆ. ಇನ್ನಂಜೆ ಶಾಲೆಯ ಬಳಿ ಶಿಥಿಲಗೊಂಡ ಓವರ್ಹೆಡ್ ಟ್ಯಾಂಕ್ಗೆ ಬದಲಾಗಿ ಹೊಸ ಓವರ್ ಹೆಡ್ ಟ್ಯಾಂಕ್ ರಚನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಗತ್ಯಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಅನುದಾನ ಸಿಗಲಿದೆ. ಬೇಸಗೆಗೆ ಮೊದಲೇ ಬಾವಿ ನಿರ್ಮಾಣ ಮಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು.
– ರಾಜೇಶ್ ಶೆಣೈ, ಪಿಡಿಒ, ಇನ್ನಂಜೆ ಗ್ರಾಮ ಪಂಚಾಯತ್
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ