ಅಧ್ಯಾಪಕರಿಂದ ರಜಾಕಾಲ ತರಬೇತಿ ಬಹಿಷ್ಕಾರ
Team Udayavani, Apr 28, 2017, 2:00 PM IST
ಮಲಯಾಳ ಕಡ್ಡಾಯ ಅಧ್ಯಾದೇಶ ವಿರೋಧಿಸಿ ಪ್ರತಿಭಟನೆ
ಕಾಸರಗೋಡು: ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನ ಬದ್ಧವಾಗಿ ನೀಡಲಾದ ಎಲ್ಲ ಸವಲತ್ತುಗಳನ್ನು ನೀಡುವ ಜತೆಗೆ ಎಲ್ಲ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರಕಾರದ್ದು. ಕಾಸರಗೋಡು ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಸಂವಿಧಾನದಲ್ಲಿ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಸರ ಗೋಡಿನಲ್ಲಿ ಆಡಳಿತ ಭಾಷೆ ಕನ್ನಡ ವಾಗಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್ ಅವರು ಸರಕಾರವನ್ನು ಆಗ್ರಹಿಸಿದರು.
ರಾಜ್ಯ ಸರಕಾರ ಮಲಯಾಳ ಅಧ್ಯಾದೇಶ ಜಾರಿಗೊಳಿಸುವ ಮೂಲಕ ಕಾಸರಗೋಡಿನ ಕನ್ನಡ ಶಾಲೆಯಲ್ಲಿ ಮಲಯಾಳ ಕಡ್ಡಾಯಗೊಳಿಸಿದ ಕ್ರಮವನ್ನು ಖಂಡಿಸಿ ಹಾಗೂ ಪ್ರತಿಭಟಿಸಿ ಕಾಸರ ಗೋಡು ಜಿ.ಯು.ಪಿ.ಎಸ್. ಶಾಲೆ ಯಲ್ಲಿ ಎಸ್.ಎಸ್.ಎ. ವತಿಯಿಂದ ಆಯೋಜಿಸಿರುವ ರಜಾ ಕಾಲದ ತರಬೇತಿಯನ್ನು ಕನ್ನಡ ಅಧ್ಯಾಪಕರು ಬಹಿಷ್ಕರಿಸಿ ಅವರು ಮಾತನಾಡಿದರು.
ಸರಕಾರ ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ನೀಡಿದ ಹಕ್ಕನ್ನು ಕಸಿದುಕೊಳ್ಳುವ ದುರಾ ಲೋಚನೆಯಿಂದ ಮಲಯಾಳ ಕಡ್ಡಾಯ ಅಧ್ಯಾದೇಶವನ್ನು ಜಾರಿಗೊಳಿಸಿದೆ. ಭಾಷಾ ಮಸೂದೆಯಿಂದ ಕನ್ನಡಿಗರನ್ನು ಹೊರತು ಪಡಿಸಿ ಮಾಲಯಾಳ ಕಲಿಕೆ ಕಡ್ಡಾಯ ಮಾಡುವುದರಲ್ಲಿ ಕನ್ನಡಿಗ ರಿಗೆ ಯಾವುದೇ ವಿರೋಧವಿಲ್ಲ. ಆದರೆ ಮಲಯಾಳಕ್ಕೆ ಸಿಗುವ ಎಲ್ಲ ಸ್ಥಾನಮಾನಗಳು ಕನ್ನಡಕ್ಕೂ ಲಭಿಸಲೇ ಬೇಕು. ಈ ರೀತಿಯಲ್ಲಿ ಅಗತ್ಯವಾದ ತಿದ್ದುಪಡಿ ಮಾಡಿ ಕನ್ನಡಿಗರಿಗೆ ಎಲ್ಲ ಸವಲತ್ತು ದೊರೆಯುವ ತನಕ ಸರಕಾರದ ಮಲಯಾಳ ಭಾಷಾ ಮಸೂದೆಯ ವಿರುದ್ಧ ವಿವಿಧ ರೀತಿಯ ಹೋರಾಟ ಅನಿವಾರ್ಯವಾಗಿದೆ. ಈ ಸಲುವಾಗಿ ಗುರುವಾರ ರಜಾಕಾಲದ ತರಬೇತಿಯನ್ನು ಕನ್ನಡ ಅಧ್ಯಾಪಕರು ಬಹಿಷ್ಕರಿಸಲಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಘಟಕದ ಅಧ್ಯಕ್ಷರಾದ ಸುಭಾಶ್ಚಂದ್ರ ಕೆ.ಎಂ., ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ, ಬಾಬು ಕೆ., ಕೆ. ವಿನೋದ್ ಮೊದಲಾದವರು ನೇತೃತ್ವ ನೀಡಿದರು. ಕೆ. ಶ್ಯಾಮ್ ಪ್ರಸಾದ್ ಮಾತನಾಡಿದರು. ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿದರು. ಎ. 28ರಂದು ಕನ್ನಡ ಮಾಧ್ಯಮ ಅಧ್ಯಾಪಕರು ನಿರಾಹಾರ ಸತ್ಯಾಗ್ರಹ ನಡೆಸಲಿದ್ದಾರೆ.
ಕನ್ನಡಿಗರ ದಮನಕ್ಕೆ ಯತ್ನ
ಭಾಷಾ ಅಲ್ಪಸಂಖ್ಯಾಕ ಪ್ರದೇಶದಲ್ಲಿ ಕನ್ನಡವನ್ನು ದಮನಿಸುವ ಕೆಲಸ ನಡೆಯು ತ್ತಿದೆ. ಅದರಂತೆ ಅಧ್ಯಾದೇಶ ಹೊರಡಿಸಿ ನಮ್ಮ ಮಾತೃ ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಸರಕಾರದ ಕ್ರಮ ಖಂಡನೀಯ ಹಾಗೂ ಪ್ರತಿಭಟಿಸ ಬೇಕಾಗಿದೆ. ಕನ್ನಡಿಗರ ನಾಳಿನ ಭವಿಷ್ಯಕ್ಕಾಗಿ, ಕನ್ನಡ ಭಾಷೆಯ ಉಳಿವಿಗಾಗಿ ನಮ್ಮ ಹೋರಾಟ ನಡೆಯಬೇಕು. ಈ ಮೂಲಕ ಸರಕಾರದ ಗಮನ ಸೆಳೆಯಬೇಕು. ನಾವು ನಮ್ಮ ಭಾಷೆಗೆ ಗೌರವ ಕೊಡುವುದರೊಂದಿಗೆ ಇನ್ನೊಂದು ಭಾಷೆಯನ್ನು ಗೌರವಿಸುತ್ತೇವೆ. ಆದರೆ ಇನ್ನೊಂದು ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದು ಸರಿಯಲ್ಲ ಎಂದು ಅಧ್ಯಾಪಕರು ಅಭಿಪ್ರಾಯಪಟ್ಟರು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಕನ್ನಡಿಗ ಪ್ರತಿನಿಧಿಯಿಲ್ಲ. ಈ ಕಾರಣದಿಂದ ಕಾಸರಗೋಡಿನ ಕನ್ನಡಿಗರ ಸಮಸ್ಯೆ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಭಾಷಾ ಮಸೂದೆ ಕೇವಲ ಕನ್ನಡ ಮಾಧ್ಯಮ ಅಧ್ಯಾಪಕರ ಸಮಸ್ಯೆ ಮಾತ್ರವಾಗಿರದೆ, ಸಮಸ್ತ ಕನ್ನಡಿಗರ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಎಚ್ಚೆತ್ತು ಹೋರಾಟ ಕ್ಕಿಳಿಯುವ ಅನಿವಾರ್ಯ ಇಂದು ಎದುರಾಗಿದೆ. ಕನ್ನಡಿಗರೆಲ್ಲ ಒಗ್ಗಟ್ಟಾಗಿ ಎದ್ದು ನಿಂತು ಉಗ್ರ ಸ್ವರೂಪದ ಪ್ರತಿಭಟನೆಗೆ ಕನ್ನಡಿಗರು ಮುಂದಾಗಬೇಕಾಗಿದೆ ಎಂಬ ಅಭಿಪ್ರಾಯ ಕೇಳಿ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ