ಮೂಲ ಸೌಕರ್ಯವೂ ಇಲ್ಲದೆ ಸಂಕಷ್ಟದಲ್ಲಿ ಕುಟುಂಬ
ಭಾರೀ ಗಾಳಿಮಳೆಗೆ ಮುರಿದು ಬಿದ್ದು ಇದ್ದ ಚಿಕ್ಕ ಸೂರೂ ಹೋಯಿತು
Team Udayavani, Sep 28, 2019, 5:21 AM IST
ಬಡವರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳು, ಅನುದಾನಗಳಿದ್ದರೂ ತಲುಪುವಲ್ಲಿಗೆ ತಲುಪುವುದಿಲ್ಲ. ಅರ್ಹರು ಇನ್ನೂ ವಂಚಿತರಾಗುತ್ತಾರೆ. ಪ್ರಗತಿಯು ಕೇವಲ ಹೇಳಿಕೆಗಳಾಗದೆ ಈ ಬಗ್ಗೆ ಜನಪ್ರತಿನಿಧಿಗಳು, ಉದ್ಯೋಗಸ್ಥರು ಪ್ರಾಮಾಣಿಕ ವಾಗಿ, ಕ್ರಿಯಾಶೀಲರಾಗಿ ಕಾರ್ಯನಿರ್ವಹಿ ಸಬೇಕು. ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.
ಪೆರ್ಲ : ವಾಸಯೋಗ್ಯ ಮನೆಯಂತೂ ಇಲ್ಲ. ಆದರೆ ಪ್ರಾಥಮಿಕ ಆವಶ್ಯಕತೆಗೆ ಶೌಚಾಲಯಚವೂ ಇಲ್ಲದೇ ಈಗಲೂ ತೆರೆದ ಪ್ರದೇಶಕ್ಕೆ ಹೋಗಬೇಕಾದ ಅಸಹಾಯಕ ಸ್ಥಿತಿ. ದುಡಿಯುವವರು ಯಾರೂ ಇಲ್ಲದೇ ಅತ್ಯಂತ ಶೋಚನೀಯ ಬಡ ಕುಟುಂಬವಾದ ಎಣ್ಮಕಜೆ ಗ್ರಾ.ಪಂ.12ನೇ ವಾರ್ಡು ಬಣುತ್ತಡ್ಕ ಸಮೀಪದ ರಂಗೊಚ್ಚಿ ಪರಿಶಿಷ್ಟ ಜಾತಿಯ ಲಕ್ಷ್ಮೀ, ವೃದ್ಧೆ ಅತ್ತೆ ಚೋಮಾರು ಹಾಗೂ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳ ಜೀವನ ಬಹಳ ಸಂಕಷ್ಟಮಯವಾಗಿದೆ.
ಲಕ್ಷ್ಮೀಯ ಪತಿ ಸಂಜೀವ ಅಬುìದ ರೋಗ ಬಾಧಿಸಿ ಇತ್ತೀಚೆಗೆ ಮೃತಪಟ್ಟಿದ್ದಾರೆ. ಇವರು ವಾಸಿಸುತ್ತಿದ್ದ ಸುಮಾರು 15 ವರ್ಷ ಹಳೆಯ ಹೆಂಚು ಹಾಸಿದ ಮನೆಯ ಮಾಡು ಕಳೆದ ಭಾರೀ ಗಾಳಿಮಳೆಗೆ ಮುರಿದು ಬಿದ್ದು ಇದ್ದ ಚಿಕ್ಕ ಸೂರೂ ಹೋಯಿತು.ಇದೀಗ ಈ ಮೂವರು ಸಮೀಪದಲ್ಲಿ ಮಡಲು,ಟಾರ್ಪಾಲು ಹಾಸಿದ ತಾತ್ಕಾಲಿಕ ಗುಡಿಸಲಿನಲ್ಲಿ ಜೀವನ ಮಾಡುತ್ತಿದ್ದಾರೆ.ವಾಸಿಸುವ ಸ್ಥಳ ಕಾಡುಗಳಿಂದ ತುಂಬಿದ್ದೂ ವಿಷಜಂತುಗಳು ಗುಡಿಸಲಿನ ಒಳಗೆ ಬಾರದಂತೆ ತಡೆಯುವ ಯಾವುದೇ ಸುರಕ್ಷೆಯೂ ಇಲ್ಲ.
ಹತ್ತು ಸೆಂಟ್ ಸ್ಥಳ ವಿದ್ದರೂ ಇವರಿಗೆ ಇದುವರೆಗೂ ಹೊಸ ಮನೆ ನಿರ್ಮಾಣಕ್ಕೆ ಅನುದಾನ ಲಭಿಸಲಿಲ್ಲ .ಪ್ರತಿ ಸಲವು ಗ್ರಾಮ ಸಭೆಗೆ ಹೋಗಿ ಮನವಿ ಮಾಡಿದರೂ ಭರವಸೆ ಮಾತ್ರ ಲಭಿಸಿದ್ದು ಎಂದು ಲಕ್ಷ್ಮಿ ಬೇಸರ, ಅಸಹಾಯಕತೆಯಿಂದ ಹೇಳುತ್ತಾರೆ.
ಲಕ್ಷ್ಮೀ ದುಡಿಯುವ ಸ್ಥಿತಿಯಲ್ಲಿ ಇಲ್ಲ. ಹೆಣ್ಣು ಮಗಳು ಸಮೀಪದ ಬಣು³ತ್ತಡ್ಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಇವಳ ವಿದ್ಯಾಭ್ಯಾಸಕ್ಕೂ ನೆರವು ನೀಡುವವರು ಇಲ್ಲ. ಲಕ್ಷ್ಮಿಯು ಪತಿಯ ಅಕಾಲಿಕ ನಿಧನದಿಂದ ಬಳಲಿ ಇನ್ನೂ ಚೇತರಿಸಿಕೊಂಡಿಲ್ಲ.
ಇವರಿಗೆ ಮನೆ ಶೌಚಾಲಯ ಲಭಿಸದ ಬಗ್ಗೆ ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ. ಅವರ ಗಮನ ಸೆಳೆದಾಗ ಅವರು, ಮೊದಲು ಪ್ಲಾನ್ ಫಂಡ್ನಿಂದ ಅನುದಾನ ನೀಡಲು ಸಾಧ್ಯವಾಗುತ್ತಿತ್ತು. ಅನಂತರ ಲೈಫ್ ಭವನ ಯೋಜನೆ ಬಂದ ಮೇಲೆ ಮನೆ ನಿರ್ಮಾಣಕ್ಕೆ ಅನುದಾನ ಲಭಿಸಬೇಕಾದರೆ ಹಲವಾರು ಮಾನದಂಡಗಳು ಇವೆ. ಆದ್ದರಿಂದ ಬಹಳಷ್ಟು ಮಂದಿಗೆ ಮನೆ ನಿರ್ಮಾಣಕ್ಕೆ ಅನುದಾನ ಲಭಿಸುವುದಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರದ ಯೋಜನೆ ಪಿಎಂಎವೈ ಜಾರಿಯಾಗಿದ್ದು ಅದರ ಜವಾಬ್ದಾರಿ ಇರುವುದು ಗ್ರಾಮ ವಿಸ್ತರಣಾಧಿಕಾರಿಗೆ. ಆದರೆ ಅವರಿಗೆ ಶೌಚಾಲಯ ನಿರ್ಮಿಸಲು ಮುಂದಿನ ಯೋಜನೆಯಲ್ಲಿ ಅನುದಾನ ಇರಿಸಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಸಹಾಯ ಹಸ್ತ
ಮನೆ ಮುರಿದು ಬಿದ್ದ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು ಅದರ ವರದಿ ಬಂದಿಲ್ಲ. ವರದಿ ಬಂದಾಗ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರಕಾರದ ಪಿಎಂಎವೈ ಯೋಜನೆಯ ಜಾಲತಾಣ ತೆರೆದಿಲ್ಲ . ಇದೀಗ ಮನವಿ ಮಾತ್ರ ಸ್ವೀಕರಿಸುವುದು ಎಂದು ಎಣ್ಮಕಜೆ ಪಂ.ಗ್ರಾಮ ವಿಸ್ತರಣಾಧಿಕಾರಿ ಹೇಳಿದರು. ಈ ಕುಟುಂಬದ ದುರವಸ್ಥೆಯ ಬಗ್ಗೆ ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿ ಅಧ್ಯಕ್ಷ ಬಾಬು ಪಚ್ಲಂಪಾರೆ ಅವರ ಗಮನ ಸೆಳೆದಾಗ, ಆ ಬಡ ಕುಟುಂಬಕ್ಕೆ ಸಾಧ್ಯವಾಗುವ ಎಲ್ಲ ಸಹಾಯ ನೀಡಲಾಗುವುದು ಎಂದು ತಿಳಿಸಿದ್ದಾರೆ.