ಪಾಳು ವಸ್ತು ಮಾರಾಟದಲ್ಲಿ ಲಭಿಸಿದ ಮೊತ್ತ ದುರಂತ ನಿವಾರಣೆ ನಿಧಿಗೆ
Team Udayavani, Dec 14, 2018, 2:30 AM IST
ಕಾಸರಗೋಡು: ಉಪಯೋಗವಿಲ್ಲದ (ಪಾಳು) ವಸ್ತುಗಳನ್ನು ಮಾರಾಟ ಮಾಡಿ ಲಭಿಸಿದ 10,200 ರೂ. ದುರಂತ ನಿವಾರಣೆ ನಿಧಿಗೆ ನೀಡುವ ಮೂಲಕ ಕೊಡಕ್ಕಾಡ್ ಸರಕಾರಿ ವೆಲ್ಫೇರ್ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ನಾಡಿಗೆ ಮಾದರಿಯಾಗಿದ್ದಾರೆ. ಹರಿತ ಕೇರಳ ಮಿಷನ್ ಯೋಜನೆ ಪ್ರಕಾರ ಹೆತ್ತವರ ಸಹಾಯದೊಂದಿಗೆ ಮಕ್ಕಳು ಶಾಲೆ ಆಸುಪಾಸಿನ ಪ್ರದೇಶಗಳಿಂದ ಪಾಳು ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಮೊಬಲಗು ಗಳಿಸಿದ್ದರು. ಮೌಲ್ಯದ ಡಿಡಿಯನ್ನು ಶಾಲಾ ಪಾರ್ಲಿಮೆಂಟ್ ಪದಾಧಿಕಾರಿಗಳಾದ ಮಕ್ಕಳು ಜಿಲ್ಲಾಧಿಕಾರಿ ಡಾ| ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದರು. ಅತ್ಯುತ್ತಮ ಶುಚಿತ್ವ ಕಾಯ್ದುಕೊಳ್ಳುವವರಿಗಿರುವ ಪದಕವನ್ನು ಜಿಲ್ಲಾಧಿಕಾರಿ ಈ ತಂಡಕ್ಕೆ ಪ್ರದಾನ ಮಾಡಿದರು.
ಈ ಸಂಬಂಧ ಜರಗಿದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ವಿ. ಶ್ರೀಧರನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್, ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕುಂಞಿ ರಾಮನ್ ಮಾಸ್ಟರ್, ನೀಲೇಶ್ವರ ಕೃಷಿ ಸಹಾಯಕ ನಿರ್ದೇಶಕಿ ಡಾ.ವೀಣಾರಾಣಿ, ಉಪಜಿಲ್ಲಾ ಶಿಕ್ಷಣ ಅಧಿಕಾರಿ ಎಂ.ಕೆ.ವಿಜಯಕುಮಾರ್, ಮುಖ್ಯಶಿಕ್ಷಕ ಕೆ.ಟಿ.ವಿ. ನಾರಾಯಣನ್, ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷ ಸುರೇಶ್ ಪಿ.ಎಸ್., ಮಾತೃ ಸಂಘ ಅಧ್ಯಕ್ಷೆ ಶ್ರೀಜಾ ಎ. ಉಪಸ್ಥಿತರಿದ್ದರು.