ಮಾನವ ಹಕ್ಕು ಆಯೋಗ ಸಭೆ: 19 ದೂರು ಇತ್ಯರ್ಥ
Team Udayavani, Aug 13, 2017, 7:50 AM IST
ಕಾಸರಗೋಡು: ಕೇರಳ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಕೆ.ಮೋಹನ್ಕುಮಾರ್ ಅವರು ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ನಡೆಸಿದ ಸಭೆಯಲ್ಲಿ ಕಾಸರಗೋಡು ಜಿಲ್ಲೆಯ 19 ದೂರುಗಳಿಗೆ ತೀರ್ಪು ಕಲ್ಪಿಸಲಾಯಿತು.
ಒಟ್ಟಾರೆಯಾಗಿ ಸಭೆಯಲ್ಲಿ 51 ದೂರುಗಳನ್ನು ಪರಿಗಣಿಸಲಾಯಿತು. ಇತರ ದೂರುಗಳಲ್ಲಿ ಸಂಬಂಧಪಟ್ಟವರಿಂದ ವರದಿ ಪಡೆದುಕೊಂಡು ಬಳಿಕ ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ. ಅಲ್ಲದೆ ದೂರುಗಳ ಕುರಿತು ಸಮಗ್ರ ಸಮಾಲೋಚನೆ ನಡೆಸಲಾಯಿತು.
ಅರ್ಥೈಸಿಕೊಳ್ಳದೆ ವರದಿ ನೀಡಬೇಡಿ
ದೂರುದಾರರಿಂದ ಸ್ಪಷ್ಟವಾದ ಮಾಹಿತಿಗಳನ್ನು ಪಡೆದು, ತನಿಖೆ ನಡೆಸಿ ಅರ್ಥೈಸಿಕೊಳ್ಳದೆ ವರದಿ ಸಲ್ಲಿಸಬಾರದು ಎಂಬುದಾಗಿ ಮಾನವ ಹಕ್ಕು ಆಯೋಗವು ಪೊಲೀಸರಿಗೆ ನಿರ್ದೇಶನ ನೀಡಿದೆ. ದೂರುಗಳ ಬಗ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದಾದರೆ ಸಭೆಗೆ ಬರುವ ಸಂದರ್ಭದಲ್ಲಿ ಇಂತಹ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಜೊತೆಗೆ ತರಬೇಕು ಎಂದು ಆದೇಶಿಸಲಾಯಿತು.
ಜಿಲ್ಲೆಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನದ ಕುರಿತು ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳಿಗಾಗಿ ಅನುದಾನ ಮಂಜೂರುಗೊಳಿಸುವ ವಿಷಯದಲ್ಲಿ ಕೇರಳ ಸರಕಾರದ ಗಮನ ಸೆಳೆಯುವುದಾಗಿ ಆಯೋಗವು ತಿಳಿಸಿದೆ.
ಎಂಡೋ ದೂರುಗಳು ಸರಕಾರದ ಪರಿಗಣನೆಗೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಉದ್ಯೋಗ ನೀಡುವ ಬಗ್ಗೆ ಬಂದ ದೂರುಗಳನ್ನು ಸರಕಾರದ ಪರಿಗಣನೆಗೆ ನೀಡಲಾಯಿತು. ಕಿನಾನೂರು- ಕರಿಂದಳಂ ಗ್ರಾಮ ಪಂಚಾ ಯತ್ನ ಭೂರಹಿತರಾದ ಆದಿವಾಸಿಗಳಿಗೆ ಭೂಮಿ ಒದಗಿಸುವ ಯೋಜನೆ ಪ್ರಕಾರ ಭೂಮಿ ನೀಡಿಲ್ಲ ಎಂಬ ದೂರಿನಂತೆ ಪಂಚಾಯತ್ ಕಾರ್ಯದರ್ಶಿಗೆ ನೋಟೀಸ್ ಕಳುಹಿಸಲಾಯಿತು. ಅಲ್ಲದೆ ಜಿಲ್ಲಾಕಾರಿಯವರಿಂದ ಈ ಬಗ್ಗೆ ವರದಿ ತರಿಸುವಂತೆ ಆಯೋಗದ ಸದಸ್ಯ ಕೆ.ಮೋಹನ್ಕುಮಾರ್ ನಿರ್ದೇಶಿಸಿದರು.