ಮೀನು ಮಾರಾಟಗಾರರಿಂದ ನಗರಸಭೆಗೆ ಜಾಥಾ
Team Udayavani, Aug 2, 2019, 5:54 AM IST
ಕಾಸರಗೋಡು: ನುಳ್ಳಿಪ್ಪಾಡಿಯಲ್ಲಿ ಮೀನು ಮಾರಾಟ ಕೇಂದ್ರವನ್ನು ಮಂಜೂರು ಮಾಡಿದ ನಗರಸಭೆಯ ಕ್ರಮವನ್ನು ಪ್ರತಿಭಟಿಸಿ ಪರಂಪರಾಗತ ಮೀನು ಮಾರಾಟಗಾರರು ಗುರುವಾರ ಬೆಳಗ್ಗೆ ನಗರಸಭೆಗೆ ಜಾಥಾ ನಡೆಸಿದರು.
ಜಾಥಾವನ್ನು ಯು.ಎಸ್. ಬಾಲನ್ ಉದ್ಘಾಟಿಸಿದರು. ಜಿ. ನಾರಾಯಣನ್ ಅಧ್ಯಕ್ಷತೆ ವಹಿಸಿದರು. ಕೌನ್ಸಿಲರ್ ಉಮಾ, ಸಿದ್ದಿಕ್ ಚೇರಂಗೈ ಮೊದಲಾದವರು ನೇತೃತ್ವ ನೀಡಿದರು. ಜಾಥಾ ಅಂಗವಾಗಿ ಮೀನು ಮಾರುಕಟ್ಟೆಯಲ್ಲಿ ಗುರುವಾರ ಹರತಾಳ ಆಚರಿಸಲಾಯಿತು.
ಜಾಥಾವನ್ನು ನಗರಸಭೆಯ ಗೇಟ್ ಬಳಿ ಪೊಲೀಸರು ತಡೆಯೊಡ್ಡಿದರು. ಆದರೆ ಜಾಥಾ ನಿರತರು ಗೇಟ್ ಹಾರಿ ನಗರಸಭಾ ಕಚೇರಿಯೊಳಗೆ ತಲುಪಿ ಧರಣಿ ಸತ್ಯಾಗ್ರಹ ನಡೆಸಿದರು. ಮಾರುಕಟ್ಟೆಗೆ ಮಂಜೂರಾತಿಯನ್ನು ಹಿಂದೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮೀನು ಮಾರಾಟಗಾರರು ಈ ಹಿಂದೆಯೇ ನಗರಸಭೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಅನುಮತಿ ಹಿಂದೆಗೆದುಕೊಳ್ಳದಿರುವುದರಿಂದ ಜಾಥಾ ನಡೆಸಲಾಯಿತು.