ಕಾಸರಗೋಡು ಅಪರಾಧ ಸುದ್ದಿಗಳು
Team Udayavani, May 16, 2022, 4:53 PM IST
ತಂಬಾಕು ಉತ್ಪನ್ನ ಸಾಗಾಟ : ಬಂಧನ
ಕಾಸರಗೋಡು: ತರಕಾರಿ ಸಾಗಾಟ ಮರೆಯಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸಿದ ಲಾರಿಯನ್ನು ವಶಪಡಿಸಿದ ಪೊಲೀಸರು ಚಾಲಕ ಮಧೂರು ನಿವಾಸಿ ಎ.ಎಂ.ಯೂಸುಫ್ (66)ನನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು ಒಂದೂವರೆ ಕ್ವಿಂಟಾಲ್ ಹೊಗೆಸೊಪ್ಪು ವಶಪಡಿಸಲಾಗಿದೆ. ಕಲ್ಲಿಕೋಟೆಯತ್ತ ಸಾಗುತ್ತಿದ್ದ ಲಾರಿಯನ್ನು ಕಣ್ಣೂರು ಟೌನ್ ಸಿ.ಐ. ಶ್ರೀಜಿತ್ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ. 30 ಗೋಣಿ ಚೀಲಗಳಲ್ಲಿ ತಂಬಾಕು ಉತ್ಪನ್ನಗಳನ್ನು ತುಂಬಿಸಿಡಲಾಗಿತ್ತು.
ಜುಗಾರಿ : ನಾಲ್ವರ ಬಂಧನ
ಹೊಸದುರ್ಗ: ಜುಗಾರಿ ದಂಧೆಯಲ್ಲಿ ನಿತರರಾಗಿದ್ದ ನಾಲ್ವರನ್ನು ಬಂಧಿಸಿದ ಅಂಬಲತ್ತರ ಪೊಲೀಸರು ಇವರಿಂದ 2230 ರೂ. ವಶಪಡಿಸಿದ್ದಾರೆ.
ಎಣ್ಣಪ್ಪಾರ ಮುಕ್ಕುಳಿಗುಳಿ ಪನಯಾಲ್ಕುನ್° ಗೋಪಾಲನ್(55), ಎಂ.ಶಂಕರನ್(46), ಕೆ.ಜಿ.ಜೋಸ್(52), ಪಿ.ಸಂತೋಷ್ (48)ನನ್ನು ಬಂಧಿಸಲಾಗಿದೆ.
ಬೈಕ್ ಢಿಕ್ಕಿ : ಅಧ್ಯಾಪಕನಿಗೆ ಗಾಯ
ಹೊಸದುರ್ಗ: ಮಾಣಿಕೋತ್ತ್ ಅಂಚೆ ಕಚೇರಿ ಪರಿಸರದಲ್ಲಿ ಬೈಕ್ ಢಿಕ್ಕಿ ಹೊಡೆದು ಮಾಣಿಕೋತ್ತ್ ಮಿಫ್ತಾಹುಲ್ ಉಲೂಂ ಮದ್ರಸ ಅಧ್ಯಾಪಕ ತಳಿಪರಂಬ ನಿವಾಸಿ ಎಂ.ಸಿ.ಮುಹಮ್ಮದ್ (63) ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
29 ಗ್ರಾಂ ಎಂ.ಡಿ.ಎಂ.ಎ. ಸಹಿತ ಇಬ್ಬರ ಬಂಧನ
ಕಾಸರಗೋಡು: ಜೀಪಿನಲ್ಲಿ ಸಾಗಿಸುತ್ತಿದ್ದ 29 ಗ್ರಾಂ ಎಂಡಿಎಂಎ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉದುಮದ ಫ್ಯಾಮಿಲಿ ರೆಸ್ಟಾರೆಂಟ್ ಮಾಲಕ ಈಚಿಲುಂಗಾಲ್ ಹುಸೈನ್ ಹೌಸ್ನ ಎನ್.ಮುನೀರ್(28), ಮುಳಿಯಾರು ಮೂಲಡ್ಕದ ಎ.ನಿಸಾಮುದ್ದೀನ್(27)ನನ್ನು ಕುಂಟಾರು ಮಸೀದಿ ಪರಿಸರದಿಂದ ಆದೂರು ಪೊಲೀಸರು ಬಂಧಿಸಿದರು.
ಬೇಕಲ ಡಿವೈಎಸ್ಪಿ ಪಿ.ಕೆ.ಸುನಿಲ್ ಕುಮಾರ್ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.