ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, May 18, 2019, 6:00 AM IST
ವ್ಯಕ್ತಿಯ ಶವ ಪತ್ತೆ
ಕಾಸರಗೋಡು ಪಾಲಕುನ್ನು ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಗೆ ಸುಮಾರು 54 ವರ್ಷ ಎಂದು ಅಂದಾಜಿಸಲಾಗಿದೆ. ಮೃತದೇಹದ ಬಳಿಯಿಂದ ಜಿಲ್ಲಾಸ್ಪತ್ರೆಯ ಚೀಟಿಯೊಂದು ಲಭಿಸಿದ್ದು, ಇವರು ನೀಲೇಶ್ವರ ನಿವಾಸಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಶುಕ್ರವಾರ ಬೆಳಗ್ಗೆ ಮೃತ ದೇಹ ಪತ್ತೆಯಾಗಿದ್ದು, ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..
ಪಾನ್ಮಸಾಲೆ ಸಹಿತ ಇಬ್ಬರ ಬಂಧನ
ಕುಂಬಳೆ: ಹೊಸಂಗಡಿಯ ಕ್ವಾರ್ಟರ್ಸ್ವೊಂದರಿಂದ 50 ಕಿಲೋ ಪಾನ್ ಮಸಾಲೆ ವಶಪಡಿಸಿಕೊಂಡ ಅಬಕಾರಿ ದಳ ಈ ಸಂಬಂಧ ಉತ್ತರ ಪ್ರದೇಶ ನಿವಾಸಿಗಳಾದ ಭಜನ್ ಮತ್ತು ರುತಾಪ್ನನ್ನು ಬಂಧಿಸಿದೆ.
ವಾರಂಟ್ ಆರೋಪಿಗಳ ಬಂಧನ
ಮಂಜೇಶ್ವರ: ವಿವಿಧ ಪ್ರಕರಣಗಳ ನಾಲ್ಕು ಮಂದಿ ವಾರಂಟ್ ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿ ಪೈವಳಿಕೆಯ ಹಮೀದ್ (35), 2018 ರಲ್ಲಿ ವಾಹನ ಅಪಘಾತ ಪ್ರಕರಣದ ಆರೋಪಿ ಉಪ್ಪಳ ನಿವಾಸಿ ಜಾಬಿರ್ ಹಸನ್, 2019ರಲ್ಲಿ ಜುಗಾರಿ ದಂಧೆ ಪ್ರಕರಣ ಮತ್ತು 2018ರಲ್ಲಿ ಹಲ್ಲೆ ಪ್ರಕರಣದ ಆರೋಪಿ ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪದ ಮನೋಜ್ ಕುಮಾರ್ (34) ಹಾಗೂ 2016ರಲ್ಲಿ ಹಲ್ಲೆ ಪ್ರಕರಣದ ಆರೋಪಿ ಕುಂಜತ್ತೂರು ನಿವಾಸಿ ಇಮಿ¤ಯಾಜ್ನನ್ನು ಬಂಧಿಸಿದ್ದಾರೆ.
ಅಪಘಾತ : ಗಾಯಾಳು ಸಾವು
ಕಾಸರಗೋಡು: ಮೇ 9 ರಂದು ರಾತ್ರಿ 10 ಗಂಟೆಗೆ ಮಲಪ್ಪುರಂ ಚೇಳಾರಿಯಲ್ಲಿ ಎರಡು ಮೋಟಾರ್ ಬೈಕ್ಗಳು ಪರಸ್ಪರ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಪರವನಡ್ಕ ಕೈಂದಾರ್ ನಿವಾಸಿ ಪಿ.ಕುಂಞಂಬು ನಾಯರ್ ಅವರ ಪುತ್ರ ಕೆ.ಅಜೀಶ್(26) ಅವರು ಮೇ 16 ರಂದು ರಾತ್ರಿ 11 ಗಂಟೆಗೆ ಸಾವಿಗೀಡಾದರು.
ಪೆಟ್ರೋಲ್ ಬಂಕ್ನಿಂದ ಕಳವು:
ಎರಡು ಬೆರಳ ಗುರುತು ಪತ್ತೆ
ಬದಿಯಡ್ಕ: ಬೀಜಂತ್ತಡ್ಕ ಪೆಟ್ರೋಲ್ ಬಂಕ್ನಿಂದ 4,000 ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆರಳ ಗುರುತು ತಜ್ಞರು ನಡೆಸಿದ ತನಿಖೆಯಲ್ಲಿ ಎರಡು ಬೆರಳ ಗುರುತು ಪತ್ತೆಯಾಗಿದೆ.
ಸ್ಕೂಟರ್ನಿಂದ ಬಿದ್ದ ವೃದ್ಧೆ ಸಾವು
ಕಾಸರಗೋಡು: ಚಟ್ಟಂಚಾಲ್ನಲ್ಲಿ ತಲೆಸುತ್ತಿ ಸ್ಕೂಟರ್ನಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಟ್ಟತ್ತೂರು ನೆಲ್ಲಿಯಡ್ಕ ಪಾಲಕಿ ಮನೆಯ ಗುರುವಯ್ಯ ಅವರ ಪತ್ನಿ ಪಿ. ಸುಶೀಲಾ (67) ಸಾವಿಗೀಡಾದರು. ಆಸ್ಪತ್ರೆಗೆ ತೆರಳಿ ಪುತ್ರನ ಜತೆ ಸ್ಕೂಟರ್ನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಅವರು ಸ್ಕೂಟರ್ನಿಂದ ಬಿದ್ದಿದ್ದರು.
ಬಾವಿಗೆ ಬಿದ್ದ ಯುವಕನ ರಕ್ಷಣೆ
ಉಪ್ಪಳ: ಬಾವಿ ಶುಚಿಗೊಳಿಸಿ ಮೇಲೇರುತ್ತಿದ್ದಾಗ ಅರ್ಧದಿಂದ ಕೆಳಕ್ಕೆ ಬಿದ್ದು ಗಾಯಗೊಂಡ ಬಂದ್ಯೋಡ್ ನಿವಾಸಿ ಸಂದೀಪ್(27)ನನ್ನು ಉಪ್ಪಳದ ಅಗ್ನಿಶಾಮಕ ದಳ ರಕ್ಷಿಸಿದೆ.