ಭಾಷೆ ಸಂಸ್ಕಾರದ ಲಕ್ಷಣ: ವಿಜಯಶಂಕರ್
Team Udayavani, Apr 2, 2018, 7:42 AM IST
ಮುಳ್ಳೇರಿಯ: ಭಾಷೆ ಎಂಬುದು ಸಂಸ್ಕಾರದ ಲಕ್ಷಣ. ಭಾಷೆ ಮತ್ತು ಸಂಸ್ಕೃತಿ ಜತೆ ಯಾಗಿ ಸಾಗಬೇಕು. ಮನಸ್ಸು ಮತ್ತು ಕಣ್ಣು ಗಳಿಂದ ಜ್ಞಾನ ವೃದ್ಧಿಯಾಗುತ್ತದೆ. ಅದರಂತೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆ ನಮ್ಮಿಂದಲೇ ಆಗಬೇಕು, ಈ ನಿಟ್ಟಿನಲ್ಲಿ ನಾವು ಕಟಿಬದ್ಧ ರಾಗ ಬೇಕೆಂದು ವಿಮರ್ಶಕ, ಅಂಕಣಕಾರ ಎಸ್.ಆರ್. ವಿಜಯಶಂಕರ್ ಹೇಳಿದರು.
ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಗಣೇಶ ಮಂದಿರದ ವಠಾರದಲ್ಲಿ ರವಿವಾರ ನಡೆದ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇ ಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗಡಿನಾಡಿನಲ್ಲಿ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳನ್ನು ಉಳಿಸುವ ಪ್ರಯತ್ನ ಇಂದು ಪ್ರಮುಖವಾದುದು. ಸಾಹಿತ್ಯವು ರೂಪಕಾತ್ಮಕ ವಾದುದಾಗಿದೆ. ಇಂದು ಕನ್ನಡ ಭಾಷೆ ಸಾಹಿತ್ಯ ಸವಾಲುಗಳ ಸುಳಿಯಲ್ಲಿರುವುದು ಸುಳ್ಳಲ್ಲ. ಯಾವ ಕಾಲಘಟ್ಟ, ಯಾವ ಭೂ ಪ್ರದೇಶವಾದರೂ ಭಾಷೆ ಅಗತ್ಯವಾಗಿದ್ದು, ಸಂಸ್ಕೃತಿ ಮತ್ತು ಭಾಷೆ ಪರಸ್ಪರ ಸಂಬಂಧ ಹೊಂದಿವೆ. ಭಾಷೆ- ಭಾಷೆಗಳ ಮಧ್ಯೆ ಸಂಬಂಧಗಳು ಮೂಡಿಬರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡಿನ ಮಕ್ಕಳು ಭಾಷಾ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇಲ್ಲಿನ ಭಾಷಾ ಸಮಸ್ಯೆಗೆ ಪರಿಹಾರ ವಾಗಿ ಸಾಂಸ್ಕೃತಿಕ ವಿನಿಮಯ, ಕೊಡು-ಕೊಳ್ಳುವ ಸಂಬಂಧ ಗಳ ಮೂಲಕ ಕರ್ನಾಟಕ ಸರಕಾರ ಮತ್ತು ವಿ.ವಿ. ಗಳು ಕಾರ್ಯಯೋಜನೆ ಹಮ್ಮಿಕೊಳ್ಳಬೇಕು. ಸಾಂಸ್ಕೃತಿಕ ನೀತಿ ಬಲಿಷ್ಠಗೊಳಿಸಬೇಕು. ಇಂದು ಜಗತ್ತಿನ ಎಲ್ಲ ವಿಷಯಗಳನ್ನು, ಗಣಕ ತಂತ್ರಜ್ಞಾನವನ್ನು ಕನ್ನಡ ದಲ್ಲೇ ಅರ್ಥೈಸುವಷ್ಟು ಕನ್ನಡ ಬೆಳೆದಿಲ್ಲ. ಕಾಸರಗೋಡಿನ ಕನ್ನಡ ಚಟುವಟಿಕೆಗಳು ಸಮಗ್ರ ಕರ್ನಾಟಕದ ಮಟ್ಟಕ್ಕೆ ಅರಿವಾಗಬೇಕಾಗಿದೆ ಎಂದರು.
ಸಮ್ಮಾನ
ವಿವಿಧ ವಲಯಗಳ ಸಾಧಕರಾದ ಕೆ. ನಾರಾಯಣ ಗಟ್ಟಿ, ಕೀರಿಕ್ಕಾಡು ವನಮಾಲ ಕೇಶವ ಭಟ್, ಮಹಾಬಲ ಶೆಟ್ಟಿ ಕೂಡ್ಲು, ಡಾ| ಗಣಪತಿ ಭಟ್ ಕುಳಮರ್ವ, ಮಹಮ್ಮದ್ ಆಲಿ ಪೆರ್ಲ, ಕೆ. ಜಲಜಾಕ್ಷಿ ಟೀಚರ್ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿ ಗೌರವಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ, ಡಾ| ನಾ. ಮೊಗಸಾಲೆ ಸಭಾಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯ ತುಳು ಅಕಾಡೆಮಿಯ ಅಧ್ಯಕ್ಷ ಪಿ.ಎಸ್. ಪುಣಿಂಚತ್ತಾಯ, ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಕುಂದಾಪುರ ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಶುಭ ಹಾರೈಸಿದರು. ಕಸಾಪ ಗಡಿನಾಡ ಘಟಕದ ಮಾಜಿ ಅಧ್ಯಕ್ಷ, ನ್ಯಾಯವಾದಿ ಐ.ವಿ. ಭಟ್ ಕಾಸರಗೋಡು ಕನ್ನಡದ ಠರಾವು ಮಂಡಿಸಿದರು.
ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಕಾಸರಗೋಡು, ಸಂಘಟನ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಂಗನಾಥ ಶೆಣೈ ಮುಳ್ಳೇರಿಯ ಉಪಸ್ಥಿತರಿದ್ದರು. ಪ್ರಚಾರ ಮತ್ತು ಮೆರವಣಿಗೆ ಸಮಿತಿ ಅಧ್ಯಕ್ಷ ಗೋವಿಂದ ಭಟ್ ಬಳ್ಳಮೂಲೆ ಸ್ವಾಗತಿಸಿ, ಪ್ರಚಾರ ಮತ್ತು ಮೆರವಣಿಗೆ ಸಮಿತಿಯ ಸಂಚಾಲಕ ಪ್ರಕಾಶ್ ಕುಂಟಾರು ವಂದಿಸಿದರು. ಕಾರ್ಯಕ್ರಮ ಸಂಯೋಜನ ಸಮಿತಿಯ ಸಂಚಾಲಕ ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.