ಭಾಷೆಗಳು ಬೆಸೆದಾಗ ಬೆಳವಣಿಗೆ ಸಾಧ್ಯ: ಮಲಾರು ಜಯರಾಮ ರೈ
Team Udayavani, Mar 20, 2018, 11:50 AM IST
ಕಾಸರಗೋಡು: ವೈವಿಧ್ಯಮಯವಾದ ಭಾರತೀಯ ಭಾಷಾ ಪರಂಪರೆ ಪರಸ್ಪರ ಅಗಣಿತ ಸಂಬಂಧಗಳನ್ನು ಹೊಂದಿದ್ದು, ಅವುಗಳು ಪರಸ್ಪರ ಬೆಸೆದಾಗ ಬೆಳವಣಿಗೆ ಸಾಧ್ಯವಾಗುತ್ತದೆ. ಭಾಷೆಗಳನ್ನು ಹತ್ತಿರಕ್ಕೆ ತರುವ ಕಾರ್ಯಚಟುವಟಿಕೆಗಳು ನಿರಂತರವಾದಾಗ ಅವಕಾಶಗಳು ವಿಸ್ತರಿಸಿ ಹೊಸತನಕ್ಕೆ ನಾಂದಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರು ಜಯರಾಮ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾಸರಗೋಡಿನ ಅಪೂರ್ವ ಕಲಾವಿದರು ಸಂಸ್ಥೆಯ ಸಹಯೋಗದಲ್ಲಿ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡ ತಿಂಗಳ ಕಾರ್ಯಕ್ರಮ ‘ಕನ್ನಡ ಚಿಂತನೆ’ ಹಾಗೂ ಕಾಸರಗೋಡಿನ ಮಲೆಯಾಳಿ ಪತ್ರಕರ್ತರಿಗೆ ನಡೆಸಿದ ಕನ್ನಡ ಕಲಿಕಾ ಕಾರ್ಯಾಗಾರದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಸಿ ಅವರು ಮಾತನಾಡಿದರು.
ಮಾತೃ ಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯುವುದರಿಂದ ಪರಸ್ಪರ ಸಂಬಂಧಗಳನ್ನು ನಿಕಟಗೊಳಿಸಿ ವಿಶಾಲತೆಗೆ ಕಾರಣವಾಗುತ್ತದೆ. ಭಾಷೆಯ ಸಂಬಂಧ ದ್ವೇಷ -ಅಸೂಯೆಗಳಿಂದ ಕಚ್ಚಾಡುವುದು ಮಾನವ ಧರ್ಮವಲ್ಲ ಎಂದು ಅವರು ತಿಳಿಸಿದರು.
ಕಾಸರಗೋಡು ಪ್ರಸ್ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡು ಕಾಸರಗೋಡಿನ ಬಹುಭಾಷಾ ಸಂಸ್ಕೃತಿಯ ಮಧ್ಯೆ ಏಕ ಭಾಷೆಯ ಅರಿವಿನಿಂದ ದ್ವೀಪಗಳಾಗುವ ಬದಲು ವಿವಿಧ ಭಾಷೆ, ಸಂಸ್ಕೃತಿಗಳನ್ನು ಅರ್ಥೈಸುವ ನಿಟ್ಟಿನ ಪ್ರಯತ್ನ ನಿರಂತರವಾಗಿ ನಡೆಯಬೇಕಿದೆ ಎಂದು ತಿಳಿಸಿದರು.
ಖ್ಯಾತ ಗಾಯಕ ರಮೇಶ್ಚಂದ್ರ ಕಾಸರಗೋಡು ಉಪಸ್ಥಿತರಿದ್ದರು. ಸಮಾರಂಭದಲ್ಲಿ ‘ಕೀರ್ತನೆಗಳಲ್ಲಿ ಸಂಸ್ಕೃತಿ ಚಿಂತನೆ’ ಎಂಬ ವಿಷಯದ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ರವಿಶಂಕರ ಜಿ.ಕೆ. ವಿಶೇಷೋಪನ್ಯಾಸ ನೀಡಿ ಮಾತನಾಡಿ, ಕನ್ನಡ ನಾಡು-ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಕೀರ್ತನಕಾರರ ವಿಶಿಷ್ಟ ಕೊಡುಗೆಗಳು ಅಪಾರ. ಜಡವಾಗಿದ್ದ ವೈದಿಕ ಧರ್ಮವನ್ನು ತಮ್ಮ ಕೀರ್ತನೆಗಳ ಮೂಲಕ ದಾಸರು ಪುನಶ್ಚೇತನಗೊಳಿಸಿದರು. ಮನೆಮನೆಗೆ ಕೀರ್ತನೆಗಳನ್ನು ತಲುಪಿಸುವ ಮೂಲಕ ಧಾರ್ಮಾಕ ಜಾಗೃತಿಯನ್ನುಂಟು ಮಾಡಲು ಅವರಿಗೆ ಸಾಧ್ಯವಾಯಿತು ಎಂದರು. ಜೈನ, ಶೈವ ಕಾವ್ಯಗಳಲ್ಲಿ ಅಥವಾ ವಚನಗಳಲ್ಲಿ ಕಾಣುವುದಕ್ಕಿಂತಲೂ ಅಧಿಕ ಪರಮತ, ಪರಧರ್ಮ ಸಹಿಷ್ಣುತೆಯನ್ನು ದಾಸ ಕೀರ್ತನೆಗಳಲ್ಲಿ ಕಾಣಲು ಸಾಧ್ಯ. ತನ್ನ ಧರ್ಮವನ್ನು ಸಮರ್ಥಿಸುವ ಭರದಲ್ಲಿ ಅವರು ಪರಧರ್ಮವನ್ನು ತೆಗಳುವುದಿಲ್ಲ. ಅಧ್ಯಾತ್ಮ ಬೋಧನೆಯಿದ್ದರೂ ಸಂಸ್ಕಾರವನ್ನು ಕೀರ್ತನೆಗಾರರು ತಿರಸ್ಕರಿಸುವುದಿಲ್ಲ ಎಂದರು. ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಬಿ. ಸ್ವಾಗತಿಸಿದರು. ಅಪೂರ್ವ ಕಲಾವಿದರು ಸಂಸ್ಥೆಯ ಡಾ.ರತ್ನಾಕರ ಮಲ್ಲಮೂಲೆ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಗಾಯಕ ರಮೇಶ್ಚಂದ್ರ ಕಾಸರಗೋಡು ಅವರಿಂದ ದಾಸ ಸಂಕೀರ್ತನೆ ನಡೆಯಿತು. ಇವರೊಂದಿಗೆ ಪಕ್ಕವಾದ್ಯಗಳಲ್ಲಿ ಹಾರ್ಮೋನಿಯಂ ಜಗನ್ನಾಥ ಶೆಣೈ ಮತ್ತು ತಬಲಾದಲ್ಲಿ ಮುರಳೀಧರ ಪೆರ್ಲ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ
Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Kasaragod ಎನ್ಡಿಎ ಅಭ್ಯರ್ಥಿ ಅಶ್ವಿನಿ ಪ್ರಚಾರಕ್ಕೆ ಅಡ್ಡಿ: ಕೇಸು ದಾಖಲು
ಸಿಡಿದ ಗ್ಯಾಸ್ ಸಿಲಿಂಡರ್; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ
Uppala ಮನೆಯಿಂದ ನಗ, ನಗದು ಕಳವು: ಯುವಕನಿಗೆ ಕೋವಿ ತೋರಿಸಿ ಬೆದರಿಕೆ