ಕಾಸರಗೋಡು : ಪಿಎಫ್ಐ ಜಿಲ್ಲಾ ಕಚೇರಿಗೆ ಎನ್ಐಎಯಿಂದ ಬೀಗ
Team Udayavani, Oct 2, 2022, 10:04 AM IST
ಕಾಸರಗೋಡು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ನಾಯಮ್ಮಾರ್ಮೂಲೆಯಲ್ಲಿರುವ ಜಿಲ್ಲಾ ಕಚೇರಿ ಹಾಗೂ ಪಿಎಫ್ಐ ನೇತಾರ ಸಹಿತ ಹಲವು ಮಂದಿ ಸದಸ್ಯರಾಗಿರುವ ಪಡನ್ನದಲ್ಲಿರುವ ನೀರಂ ಚಾರಿಟೆಬಲ್ ಟ್ರಸ್ಟ್ ಕಚೇರಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬೀಗ ಜಡಿದು ಮೊಹರು ಲಗತ್ತಿಸಿದೆ.
ಚೆಂಗಳ ಪಂಚಾಯತ್ನ ನಾಯಮ್ಮಾರಮೂಲೆ ಪೆರುಂಬಳ ಕಡವ್ ಸೇತುವೆ ಸಮೀಪ ಚಂದ್ರಗಿರಿ ಚಾರಿಟೆಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿರುವ ಪಿಎಫ್ಐ ಜಿಲ್ಲಾ ಕಚೇರಿಗೆ ಬೀಗ ಜಡಿದು ಮೊಹರು ಲಗತ್ತಿಸಲಾಗಿದೆ. ಈ ಮೊದಲು ಪಿಎಫ್ಐ ಮತ್ತು ಅದರ ಸಹ ಸಂಘಟನೆಗಳ ಮೇಲೆ ಕೇಂದ್ರ ಸರಕಾರ ಹೇರಿದ ನಿಷೇಧದ ಪೂರ್ಣ ಮಾಹಿತಿಗಳನ್ನೊಳಗೊಂಡ ನೋಟಿಸನ್ನು ಈ ಕಚೇರಿಯ ಎದುರುಗಡೆ ಬಾಗಿಲಿಗೆ ಲಗತ್ತಿಸಲಾಗಿದೆ. ಎನ್ಐಎ ಕೊಚ್ಚಿ ಘಟಕದ ಚೀಫ್ ಇನ್ವೆಸ್ಟಿಗೇಶನ್ ಆಫೀಸರ್ ಕೆ. ಉಮೇಶ್ ರಾಯ್ ಅವರ ನೇತೃತ್ವದ ಎನ್ಐಎ ತಂಡ ಈ ಕಚೇರಿಗೆ ನೋಟಿಸ್ ಲಗತ್ತಿಸಿ ಬೀಗ ಜಡಿದಿದೆ. ಇಬ್ಬರು ತಹಶೀಲ್ದಾರರು, ಡಿವೈಎಸ್ಪಿಗಳಾದ ವಿ.ವಿ. ಮನೋಜ್, ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ ಕುಮಾರ್ ಸಹಿತ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಹಾಗೂ ಎನ್ಐಎಯ ನಿರ್ದೇಶನ ಪ್ರಕಾರ ಹೊಸದುರ್ಗ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್, ಚಂದೇರ ಪೊಲೀಸ್ ಇನ್ಸ್ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ಪೊಲೀಸರು ನೀರಂ ಚಾರಿಟೆಬಲ್ ಟ್ರಸ್ಟ್ಗೂ ಮೊಹರು ಹಾಕಿದ್ದಾರೆ. ಪಡನ್ನ ಹೈಸ್ಕೂಲಿಗೆ ಸಮೀಪದ ಕಟ್ಟಡದಲ್ಲಿ ನಾಮಫಲಕ ಇಲ್ಲದೆ ಈ ಕಚೇರಿ ಕಾರ್ಯಾಚರಿಸುತ್ತಿತ್ತು. ಎನ್ಐಎ ಬಂಧಿಸಿದ ಪಿಎಫ್ಐ ಜಿಲ್ಲಾಧ್ಯಕ್ಷ ತೃಕ್ಕರಿಪುರ ಮೊಟ್ಟಮ್ಮಲ್ನ ಸಿ.ಟಿ. ಸುಲೈಮಾನ್ ಸಹಿತ ಹಲವರು ಈ ಟ್ರಸ್ಟ್ನ ಸದಸ್ಯರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಆಗಸ್ಟ್ ಒಂದೇ ತಿಂಗಳಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್