ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆ ಆರೋಪ: ಪರಿಶೀಲನೆ
Team Udayavani, Mar 17, 2018, 11:40 AM IST
ಸೋಮವಾರಪೇಟೆ: ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ಸಮೀಪದ ತಣ್ಣೀರುಹಳ್ಳ ಗ್ರಾಮಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹೇಂದ್ರಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ತಣ್ಣೀರುಹಳ್ಳ ಗ್ರಾಮದಲ್ಲಿ ಎಸ್ಇಪಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ರಸ್ತೆಗಳ ಕಾಂಕ್ರೀಟೀಕರಣ ನಡೆಯುತ್ತಿದ್ದು, ಇದಕ್ಕೆ ಬಳಸುತ್ತಿರುವ ಪರಿಕರಗಳು ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಅಧಿಕಾರಿ ಭೇಟಿ ನೀಡಿದರು. ಬಾಣಾವರ ಕಲ್ಲುಕೋರೆಯಿಂದ ನಿರುಪಯುಕ್ತವಾಗಿರುವ ಕಲ್ಲಿನ ಪುಡಿಯನ್ನು ತಂದು ವೆಟ್ಮಿಕ್ಸ್ ಎಂದು ರಸ್ತೆಗೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು, ತಕ್ಷಣ ಈ ಪರಿಕರವನ್ನು ತೆರವುಗೊಳಿಸಬೇಕು. ಹಾಗು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.
ಕಾಮಗಾರಿ ಕಳಪೆಯಾಗಿರುವದು ಮೇಲ್ನೋಟಕ್ಕೆ ಕಂಡುಬಂದಿದ್ದು, ತತ್ಕ್ಷಣ ರಸ್ತೆಗೆ ಹಾಕಿರುವ ಕಳಪೆ ಗುಣಮಟ್ಟದ ಪರಿಕರಗಳನ್ನು ತೆರವು ಗೊಳಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಗುತ್ತಿಗೆದಾರ ಶಿವಕುಮಾರ್ ಅವರಿಗೆ ಎಇಇ ನಿರ್ದೇಶ ನೀಡಿದರು. ತಾಲೂಕಿನಾದ್ಯಂತ ಎಸ್ಇಪಿ ಮತ್ತು ಟಿಎಸ್ಪಿ ಯೋಜನೆಯಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ. ಸಂಬಂಧಿಸಿದ ಎಂಜಿನಿಯರ್ಗಳು ಪರಿಶೀಲಿಸುತ್ತಿಲ್ಲ. ಸರಕಾರದ ಹಣ ಪೋಲಾ ಗುತ್ತಿದೆ ಎಂದು ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಆರೋಪಿಸಿದರು.