ಮಡಿಕೇರಿ: ಅಂಚೆ ಮೂಲಕ ಕಾವೇರಿ ತೀರ್ಥ, ಪ್ರಸಾದ
Team Udayavani, Mar 7, 2023, 6:27 AM IST
ಮಡಿಕೇರಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಮಡಿಕೇರಿ ಅಂಚೆ ಕಚೇರಿಯ ಸಹಕಾರದೊಂದಿಗೆ ಕಾವೇರಿ ಕ್ಷೇತ್ರದ ತೀರ್ಥ ಮತ್ತು ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಆನ್ ಲೈನ್ ಸೇವೆಗೆ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಸೋಮವಾರ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ತಲಕಾವೇರಿಯ 100 ಮಿ.ಲೀ. ತೀರ್ಥ, ತ್ರಿವೇಣಿ ಸಂಗಮ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲದ ಪಂಚಕಜ್ಜಾಯ, ಕುಂಕುಮ, ಗಂಧವನ್ನು ಒಳಗೊಂಡ ಪ್ರಸಾದದ ಡಬ್ಬಿಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.
ಆಸಕ್ತರು http://www.indiapost.com ವೆಬ್ಸೈಟ್ಗೆ ಲಾಗ್ ಇನ್ ಆಗಿ, 300 ರೂ. ಪಾವತಿಸಿ ಪ್ರಸಾದಕ್ಕೆ ಬೇಡಿಕೆಯನ್ನು ಸಲ್ಲಿಸಬಹುದು. ಈ ಆನ್ಲೈನ್ ಬೇಡಿಕೆಗೆ ಅನುಗುಣವಾಗಿ ಅಂಚೆ ಮೂಲಕ ಪ್ರಸಾದವನ್ನು ಸಂಬಂಧಿಸಿದವರಿಗೆ ತಲುಪಿಸಲಾಗುತ್ತದೆ.
ದೇಶವ್ಯಾಪಿ ಲಭ್ಯ
ವೆಬ್ಸೈಟ್ ಮೂಲಕ ಬರುವ ಬೇಡಿಕೆಗೆ ಅನುಗುಣವಾಗಿ ಪ್ರಸಾದ ವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ದೇಶದ ಒಳಗಿನ ಯಾವುದೇ ಪ್ರದೇಶಕ್ಕೆ ಪ್ರಸಾದವನ್ನು ತಲುಪಿಸಲಾಗುತ್ತದೆ ಎಂದು ಮಡಿಕೇರಿ ಅಂಚೆ ಕಚೇರಿಯ ಸೂಪರಿಂಟೆಂಡೆೆಂಟ್ ರಮೇಶ್ ಬಾಬು ತಿಳಿಸಿದರು.