ಮಂಡೂಕ ವಟಗುಟ್ಟುತ್ತಿದೆ ಮಳೆರಾಯ ಇಳೆಗಿಳಿವನೇ?
Team Udayavani, Jun 10, 2019, 6:05 AM IST
ವಿದ್ಯಾನಗರ: ಕಪ್ಪೆಗಳ ಕೂಗು ಕೇಳಿಸಿತೆಂದರೆ ಮಳೆಗಾಲ ಪ್ರಾರಂಭವಾಗುತ್ತದೆ ಎನ್ನುವ ನಂಬಿಕೆ ಬಹಳ ಹಿಂದಿನ ಕಾಲ ದಿಂದಲೂ ಜೀವಂತವಾಗಿದೆ. ಚರ್ಮ ಒಣಗಿದರೆ ಕೂಡಲೆ ಸಾಯುವ ಕಪ್ಪೆಗಳು ಬೇಸಗೆಯ ಬಿಸಿಗೆ ಭೂಮಿಯಡಿಯ ತೇವದ ಪ್ರದೇಶಗಳನ್ನು ಆಶ್ರಯಿಸುತ್ತವೆ. ಅಲ್ಲಿ ಸುಖ ನಿದ್ರೆಗೆ ಜಾರುತ್ತವೆೆ.
ಮುಂಗಾರು ಮಳೆಯ ಹನಿಗಳು ಭೂಮಿ ಯನ್ನು ಸ್ಪರ್ಶಿಸುತ್ತಿದ್ದಂತೆ ನಿದ್ದೆಯಿಂದೆದ್ದು ಭೂಮಿಯ ಮೇಲ್ಮೆŒ„ಗೆ ಬರುವ ಕಪ್ಪೆಗಳು ಚಿತ್ರ ವಿಚಿತ್ರ ಶಬ್ದಗಳನ್ನು ಉಂಟುಮಾಡಿ ವಟಗುಟ್ಟುತ್ತವೆ.
ಇದು ಕಪ್ಪೆಗಳು ಮಳೆಯನ್ನು ಕರೆಯುವ ರೀತಿ ಎನ್ನುವುದು ಹಿರಿಯರ ಮಾತು.
ಮಳೆಗಾಲ ಮತ್ತು ಚಳಿಗಾಲದಲ್ಲಿ ಅಲ್ಲಿಲ್ಲಿ ಕುಪ್ಪಳಿಸುವ ವಿವಿಧ ಜಾತಿಯ, ವಿವಿಧ ಗಾತ್ರದ, ವಿವಿಧ ಬಣ್ಣಗಳ ಕಪ್ಪೆಗಳ ಲೋಕವೇ ನಮ್ಮೆದುರು ತೆರೆದುಕೊಳ್ಳುತ್ತದೆ. ಮನೆಯಂಗಳದಲ್ಲಿ, ಬಾಗಿಲಿನ ಸಂದಿಯಲ್ಲಿ ಎಲ್ಲೆಲ್ಲೂ ಛಂಗನೆ ನೆಗೆಯುವ ಕಪ್ಪೆಗಳೆ. ಶಾಲೆಗೆ ಹೋಗುವ ಹಾದಿಯಲ್ಲಿ ಕಪ್ಪೆಗೆ ಕಲ್ಲು ಬಿಸಾಡುವ ತುಂಟ ಮಕ್ಕಳಿಗೆ ಆಟವಾಡಲು ತೋಡು, ಕೊಳದ ನೀರಿನಲ್ಲಿ ತೇಲಾಡುವ ಕಪ್ಪೆಗಳ ಗುಂಪೆಂದರೆ ಪ್ರಿಯ.
ಮುಂಗಾರು ಪ್ರಾರಂಭವಾಗುವ ಮುನ್ನ ಕಪ್ಪೆಗಳ ಕೂಗು ಮುಗಿಲು ಮುಟ್ಟುತ್ತದೆ. ಇದು ಕಪ್ಪೆಗಳ ಸಂತಾನೋತ್ಪತ್ತಿಯ ಸಮಯವೂ ಹೌದು.ಮಳೆಗಾಗಿ ಆಕಾಶಕ್ಕ ದೃಷ್ಟಿನೆಟ್ಟು ಸೋತು ಹೋದ ಕಂಗಳಿಗೆ ಈಗ ಕಪ್ಪೆಗಳ ಕಲರವ ಕೊಂಚ ಸಮಾಧಾನ ಪಡುವಂತೆ ಮಾಡಿದೆ. ಮುಂಗಾರು ಮಳೆ ಕೆಲವೇ ದಿನಗಳಲ್ಲಿ ಸುರಿಯುವ ಭರವಸೆ ಮೂಡಿದೆ.
ಉಭಯ ಜೀವಿಯಾದ ಕಪ್ಪೆಗಳು ಬಹುತೇಕ ಮಾಂಸಾಹಾರಿಗಳು. ನೀರಿನಲ್ಲಿ ಮೊಟ್ಟೆಯಿಡುವ ಇವುಗಳು ಅಪರೂಪಕ್ಕೆ ಭೂಮಿಯ ಮೇಲೂ ಮೊಟ್ಟೆ ಇಡುವುದಿದೆ. ಮೊಟ್ಟೆಗಳು ಗೊದಮೊಟ್ಟೆ ಮರಿಗಲಾಗಿ ನಂತೆ ಕಪ್ಪೆಮರಿಗಳಾಗಿ ರೂಪಾಂತರ ಹೊಂದುವ ನಿರುಪದ್ರವಿ ಜೀವಿಗಳಿವು.
– ವಿದ್ಯಾಗಣೇಶ್ ಆಣಂಗೂರು