ಸಚಿವ ಸಜಿ ಚೆರಿಯಾನರನ್ನು ಭೇಟಿಯಾದ ಶಾಸಕ ಎ.ಕೆ ಎಂ.ಅಶ್ರಫ್: ವಿವಿಧ ಯೋಜನೆಗಳ ಕುರಿತು ಚರ್ಚೆ
Team Udayavani, Jun 28, 2021, 12:19 PM IST
ಮಂಜೇಶ್ವರ/ತಿರುವಂತಪುರ: ಮಂಜೇಶ್ವರ ಕ್ಷೇತ್ರದ ಎಂಟು ತೀರ ಪ್ರದೇಶ ರಸ್ತೆಗಳ ಅಭಿವೃದ್ಧಿಗಾಗಿ ಆಡಳಿತಾತ್ಮಕ ಅನುಮೋದನೆ ಹಾಗೂ ಸಮುದ್ರದ ಅಬ್ಬರದಿಂದ ತತ್ತರಿಸಿದ ಪ್ರದೇಶಗಳ ಜನತೆಯ ಗೋಳನ್ನು ವಿವರಿಸಿ, ಟ್ರಾಲಿಂಗ್ ನಿಷೇಧದ ಅವಧಿಯಲ್ಲಿ ಸರ್ಕಾರ ಮೀನುಗಾರರಿಗೆ ನ್ಯಾಯಬೆಲೆ ಅಂಗಡಿಯ ಮೂಲಕ ವಿತರಿಸುವ ಆಹಾರ-ಧಾನ್ಯಗಳನ್ನು ಪಡೆಯಲು ಅರ್ಹರಾದ ಹಲವು ಫಲಾನುಭವಿಗಳು ಪ್ರಸ್ತುತ ಯೋಜನೆಯ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವುದರ ಬಗ್ಗೆ ಮಂಜೇಶ್ವರ ಕ್ಷೇತ್ರದ ಶಾಸಕರಾದ ಶ್ರೀ ಎ ಕೆ ಎಂ ಅಶ್ರಫ್ ಕೇರಳ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ಸಚಿವರಾದ ಶ್ರೀ ಸಜಿ ಚೆರಿಯಾನ್ ಇವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ತೀರಪ್ರದೇಶದ ಜನತೆಯ ಬಗ್ಗೆ ಹಾಗೂ ಮೀನುಗಾರರ ವಿಚಾರವಾಗಿ ಜೂನ್ ತಿಂಗಳಲ್ಲಿ ಶಾಸಕರು ಸಚಿವರನ್ನು ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ.ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಕ್ಷೇತ್ರದ ತೀರ ಪ್ರದೇಶಕ್ಕೆ ಸಚಿವರು ಮುಖತಃ ಭೇಟಿಯಾಗಬೇಕೆಂದು ಮನವಿ ಮಾಡಿದ ಎ ಕೆ ಎಂ ಅಶ್ರಫ್ ರವರು ಉಪ್ಪಳ ಮುಸೋಡಿ, ಕೊಯಿಪ್ಪಾಡಿ, ಪೆರ್’ವಾಡ್, ಕೊಪ್ಪಳ, ಮಂಜೇಶ್ವರ ಕಣ್ವ ತೀರ್ಥ, ಹೊಸಬೆಟ್ಟು, ಬೆಂಗ್ರೆ ಮಂಜೇಶ್ವರ, ಆರಿಕ್ಕಾಡಿ ಮುಂತಾದ ತೀರಪ್ರದೇಶಗಳಿಗಾಗಿ ಪ್ರತ್ಯೇಕ ಪ್ಯಾಕೇಜ್ ಮಂಜೂರು ಮಾಡಬೇಕೆಂದು ಕೋರಿದರು.
ಕಡಲಿನ ಅಬ್ಬರವನ್ನು ತಡೆಯಲು ಟೆಟ್ರಾಪೋಡ್ ಯೋಜನೆಯನ್ನು ಕೇರಳದಲ್ಲಿ ಜಾರಿಗೊಳಿಸುವಾಗ ಮಂಜೇಶ್ವರವನ್ನು ಸಮುದ್ರದ ಅಬ್ಬರ ಅತಿಯಾದ ಕ್ಷೇತ್ರ ಎಂಬ ಕಾರಣದಿಂದ ಮೊದಲಿನ ಆದ್ಯತೆ ನೀಡಬೇಕು.ಸಮುದ್ರ ತೀರದಿಂದ ಮನೆ ಮತ್ತು ಆಸ್ತಿಯನ್ನು ಬಿಟ್ಟು ತೆರಳುವವರಿಗೆ ‘ಪುನರ್’ಗೇಹಂ’ ಯೋಜನೆಯ ಮೂಲಕ ವಿತರಿಸುವ ಆರ್ಥಿಕ ನೆರವನ್ನು ಹತ್ತು ಲಕ್ಷದಿಂದ ಇಪ್ಪತ್ತು ಲಕ್ಷಕ್ಕೆ ಹೆಚ್ಚಿಸಬೇಕು. ಹೀಗೆ ತೆರಳುವವರಲ್ಲಿ ಒಂದೇ ಮನೆಯ ಒಂದಕ್ಕಿಂತ ಹೆಚ್ಚು ಕುಟುಂಬವಿದ್ದಲ್ಲಿ ಅವನ್ನು ಬೇರೆ ಕುಟುಂಬ ಎಂದು ಗಣನೆಗೆ ತೆಗೆದುಕೊಂಡು ಧನ ಸಹಾಯಯನ್ನು ನೀಡಬೇಕು ಎಂದು ಮನವಿಯಲ್ಲಿ ವಿವರಿಸಲಾಯಿತು.ಮನವಿಯನ್ನು ಕೂಲಂಕಷವಾಗಿ ಆಲಿಸಿದ ಸಚಿವರು ಸಾಧ್ಯವಾಗುವ ಮಟ್ಟಿನಲ್ಲಿ ಸಹಕಾರವನ್ನು ನೀಡುವ ಬಗ್ಗೆ ಭರವಸೆ ನೀಡಿರುವುದಾಗಿ ಶಾಸಕರು ತಿಳಿಸಿದರು.