ವೃದ್ಧ ಮಂದಿರದಲ್ಲಿ ತಂಗಿದ್ದ ಮಹಿಳೆ ಸಂಬಂಧಿಕರಿಗೆ ಹಸ್ತಾಂತರ
Team Udayavani, Apr 13, 2019, 3:11 PM IST
ಬದಿಯಡ್ಕ : ವೃದ್ಧ ಮಂದಿರದಲ್ಲಿ ತಂಗಿದ್ದ ವೃದ್ಧೆಯ ಸಂಬಂಧಿಕರನ್ನು ಪತ್ತೆ ಮಾಡಿ ಅವರ ವಶಕ್ಕೆ ಹಸ್ತಾಂತರಿಸಲಾಗಿದೆ.ಕಾಸರಗೋಡು ಸರಕಾರಿ ವೃದ್ಧಸದನದಲ್ಲಿ ಆಶ್ರಯ ಪಡೆಯುತ್ತಿದ್ದ ಮಣಿಯಮ್ಮ (75) ಈ ರೀತಿ ಸಂಬಂಧಿಕರಿಗೆ ಹಸ್ತಾಂತರಗೊಂಡವರು.
2018 ಡೆಸೆಂಬರ್ ತಿಂಗಳಲ್ಲಿ ಪಿಂಕ್ ಪೋಲೀಸರ (ಮಹಿಳೆಯರಿಗೆ ಸಹಾಯ ಒದಗಿಸುವ ಮಹಿಳಾ ಪೋಲೀಸ್ ದಳ) ಸಹಾಯದಿಂದ ಸರಕಾರಿ ವೃದ್ಧ ಮಂದಿರ ಸೇರಿದ್ದರು. ತಮಿಳುನಾಡಿನಿಂದ ಬಸ್ ಮೂಲಕ ಚಿಕ್ಕಮಂಗಳೂರಿನಲ್ಲಿರುವ ಪುತ್ರಿಯ ಮನೆಗೆ ತೆರಳುವ ದಾರಿ ಮಧ್ಯೆ ಕಾಸರಗೋಡಿನಲ್ಲಿ ಇಳಿದ ಮೂಲಕ ಅವರು ಯಾತ್ರೆಯಿಂದ ಕಳಚಿಕೊಂಡಿದ್ದರು. ನಂತರ ಅನಾಥ ಸ್ಥಿತಿಯಲ್ಲಿ ಕಂಡು ಬಂದ ಅವರನ್ನು ಪಿಂಕ್ ಪೋಲೀಸರು ವೃದ್ಧ ಮಂದಿರಕ್ಕೆ ಸೇರ್ಪಡೆಗೊಳಿಸಿದ್ದರು.
ತಮ್ಮ ಊರಿನ ಬಗ್ಗೆ , ಸಂಬಂಧಿಕರ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗದಷ್ಟು ದುರ್ಬಲರಾದ ಹಿನ್ನಲೆಯಲ್ಲಿ ಇವರ ವಿಳಾಸ ಪತ್ತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಷ್ಟ ಸಾಧ್ಯವಾಗಿತ್ತು. ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರ ಮತ್ತು ವೃದ್ಧ ಮಂದಿರದ ಅಧಿಕಾರಿಗಳು ನಡೆಸಿದ ಯತ್ನದ ಫಲವಾಗಿ ತಮಿಳುನಾಡಿನ ತಿಟ್ಟುಗಟ್ಟಿ ಪೋಲೀಸರ ಸಹಾಯದಿಂದ ನಡೆದ ತನಿಖೆಯಲ್ಲಿ ಮಣಿಯಮ್ಮ ಅವರ ವಿಳಾಸ ಮತ್ತು ಸಂಬಂಧಿಕರ ಪತ್ತೆಯಾಗಿತ್ತು.
ಮಣಿಯಮ್ಮ ಅವರನ್ನು ಸಂಬಂಧಿಕರಿಗೆ ಒಪ್ಪಿಸುವ ಸಂಬಂಧ ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ಸಭೆ ನಡೆಯಿತು. ಜಿಲ್ಲಾ ನ್ಯಾಯಮೂರ್ತಿ ಎಸ್. ಮನೋಹರ್ ಕಿಣಿ ಅವರು ಮಣಿಯಮ್ಮ ಅವರನ್ನು ಪುತ್ರಿಗೆ ಹಸ್ತಾಂತರಿಸಿದ್ದಾರೆ.
ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶನ್ ಪಿ.ಟಿ., ವೃದ್ಧ ಮಂದಿರ ವರಿಷ್ಠಾಧಿಕಾರಿ ಪಂಕಜಾಕ್ಷನ್ ಪಿ.ಎಂ. ಮೊದಲಾದವರು ಉಪಸ್ಥಿತರಿದ್ದರು.