ಇಂದು ಕುಡಾಲುಮೇರ್ಕಳದಲ್ಲಿ ಓಣಂ ಕನ್ನಡ ಜಾನಪದ ಉತ್ಸವ
Team Udayavani, Sep 9, 2017, 6:50 AM IST
ಉಪ್ಪಳ: ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಸುಬ್ಬಯ್ಯಕಟ್ಟೆ ಕನ್ನಡ ಸಂಘ ಮತ್ತು ಟಿಎಎಸ್ಸಿಗಳ ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತು ಕೇರಳ ಜಾನಪದ ಅಕಾಡೆಮಿಗಳ ಸಹಕಾರದೊಂದಿಗೆ ಸೆ.9 ರಂದು ಕುಡಾಲುಮೇರ್ಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಓಣಂ ಕನ್ನಡ ಜಾನಪದ ಉತ್ಸವ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಜಾನಪದ ಸಾಂಸ್ಕೃತಿಕ ಮೆರವಣಿಗೆಯನ್ನು ಉದ್ಘಾಟಿಸುವರು. 11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕಾಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಡಿ.ಎಚ್. ಶಂಕರಮೂರ್ತಿ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಪಶುಸಂಗೋಪನಾ ಸಚಿವ ಎ.ಮಂಜು, ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಝಾಕ್, ಶಾಸಕಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ಕರ್ನಾಟಕ ರಾಜ್ಯ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಕೆ.ವಿ.ಆರ್. ಠಾಗೋರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರು ವರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯಕ್, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಶಾಸಕ ಸಿ.ಎಚ್. ಕುಂಞಂಬು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರುಗಳಾದ ಕೆ.ಆರ್. ಜಯಾನಂದ, ಪ್ರಸಾದ ರೈ ಕಯ್ನಾರ್, ಕರ್ನಾಟಕ ಸಂಸ್ಕೃತಿ ಇಲಾಖೆಯ ಸಹಾಯ ಚಂದ್ರಹಾಸ ರೈ ಶುಭಾಶಂಸನೆ ಗೈಯುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್, ಕೇರಳ ತೋಟಗಾರಿಕಾ ನಿಗಮದ ಅಧ್ಯಕ್ಷ ರಾಜನ್, ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಮಂಜೇಶ್ವರ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜೆ.ಎಸ್., ಉದ್ಯಮಿ ಹರ್ಷ ಮೇಲಾಂಟ, ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಸುಭಾಶ್ಚಂದ್ರ ಪುರಾಣಿಕ್, ಉದ್ಯಮಿ ಬಿ.ಎ. ಖಾದರ್ ಮೊದಲಾದವರು ಉಪಸ್ಥಿತರಿರುವರು.
ಬಳಿಕ ಮಾಟೂರು ಕುಮಾರನ್ ಮತ್ತು ತಂಡದವರಿಂದ ಮಾರಿಯಾಟಂ ನೃತ್ಯ, ಕನ್ನೆಪ್ಪಾಡಿಯ ಬೊಲಿಕೆ ಜಾನಪದ ಕಲಾ ತಂಡದವರಿಂದ ಎಲೆ ನೃತ್ಯ, ಶಂಕರರ ಸ್ವಾಮಿಕೃಪಾ ಮತ್ತು ತಂಡದವರಿಂದ ಆದಿವಾಸಿ ನೃತ್ಯ, ಮೀಡಿಯಾ ಕ್ಲಾಸಿಕಲ್ಸ್ ಬದಿಯಡ್ಕ ತಂಡದವರಿಂದ ಸಿಂಗಾರಿ ಮೇಳ ಮತ್ತು ಬಾಳೆಸಾಂತು ಹಾಗೂ ಮಡಿಕೇರಿ ವಿರಾಜಪೇಟೆಯ ಬಕ್ಕೆ ಸೊಡೂxರು ಮಂಡತವ್ವ ತಂಡದವರಿಂದ ಉಮ್ಮತ್ತಾಟ್, ಕೋಲಾಟ, ಗೆಜ್ಜೆತಂಡು, ಕತ್ತಿಯಾಟು ಹಾಗೂ ಕರ್ನಾಟಕ ಖ್ಯಾತ ಕಲಾ ತಂಡಗಳಿಂದ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಮೊದಲಾದ ಜಾನಪದ ನೃತ್ಯ ವೈಭವಗಳು ಪ್ರದರ್ಶನಗೊಳ್ಳಲಿವೆ.