ರಕ್ಷಿತಾರಣ್ಯದಲ್ಲಿ ಬೇಟೆ ಅರಣ್ಯಪಾಲಕರ ಗುಂಡಿಗೆ ಓರ್ವ ಸಾವು
Team Udayavani, Dec 13, 2018, 10:11 AM IST
ಕಾಸರಗೋಡು: ರಕ್ಷಿತಾರಣ್ಯದಲ್ಲಿ ಬೇಟೆಯಾಡುತ್ತಿದ್ದ ತಂಡದ ಮೇಲೆ ಅರಣ್ಯಪಾಲಕರು ಗುಂಡು ಹಾರಿಸಿದ್ದರಿಂದ ಓರ್ವ ಸಾವಿಗೀಡಾಗಿದ್ದಾನೆ. ಬೇಟೆಯಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಚಿತ್ತಾರಿಕಲ್ ತೈಮೇನಿ ನಿವಾಸಿ ತಾನಿಕ್ಕಲ್ಕೊಚ್ಚು ಅಲಿಯಾಸ್ ಜಾರ್ಜ್ ವರ್ಗೀಸ್ (48) ಎಂದು ಗುರುತಿಸಲಾಗಿದೆ. ಕಾಸರಗೋಡು ಚಿತ್ತಾರಿಕಲ್ನಿಂದ 3 ಕಿ. ಮೀ. ದೂರದಲ್ಲಿರುವ ಕರ್ನಾಟಕದ ಭಾಗಮಂಡಲ ವ್ಯಾಪ್ತಿಗೊಳಪಟ್ಟ ವಾಗಾಮಣ್ ತಟ್ಟದಲ್ಲಿ ಘಟನೆ ಸಂಭವಿಸಿದೆ.
ಜಾರ್ಜ್ ಅವರು ಸ್ನೇಹಿತರಾದ ಚಿತ್ತಾರಿಕಲ್ನ ಅಶೋಕನ್ ಮತ್ತು ಚಂದ್ರನ್ ಜತೆಗೆ ಮನೆಯಿಂದ 3 ಕಿ. ಮೀ. ದೂರದಲ್ಲಿರುವ ರಕ್ಷಿತಾರಣ್ಯಕ್ಕೆ ವನ್ಯಜೀವಿ ಬೇಟೆಗೆಂದು ಹೋಗಿದ್ದರು. ಆ ವೇಳೆ ಗಸ್ತು ತಿರುಗುತ್ತಿದ್ದ ಅರಣ್ಯಪಾಲಕರು ಹಾರಿಸಿದ ಗುಂಡು ಜಾರ್ಜ್ ಅವರ ಎದೆಗೆ ತಗಲಿ ಸಾವಿಗೀಡಾದರು. ಅವರ ಜತೆಗಿದ್ದ ಅಶೋಕನ್ ಮತ್ತು ಚಂದ್ರನ್ನನ್ನು ಬಂಧಿಸಲಾಗಿದೆ.