ತುಂಬಿ ತುಳುಕಿದ ಮಧುವಾಹಿನಿ; ಮಧೂರು ಜಲಾವೃತ
Team Udayavani, Jul 22, 2019, 5:37 AM IST
ವಿದ್ಯಾನಗರ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿವ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಕ್ಷೇತ್ರ ಜಲಾವೃತವಾಗಿದೆ. ದೇವಸ್ಥಾನದ ಎದುರಿನಿಂದ ಹರಿಯುವ ಮಧುವಾಹಿನಿಯು ತುಂಬಿ ತುಳುಕಿರುವುದೇ ಇದಕ್ಕೆ ಕಾರಣ. ಪ್ರತಿವರ್ಷ ಮಧೂರು ಕ್ಷೇತ್ರವು ನೀರಿನಿಂದ ತುಂಬುತ್ತಿದ್ದು ಈ ವರ್ಷ ತಡವಾಗಿ ಪ್ರಾರಂಭವಾದ ಮಳೆಯು ಇದೀಗ ಬಿರುಸಿನಿಂದ ಸುರಿಯಲಾರಂಭಿಸಿದ್ದು ದೇವಸ್ಥಾನದ ಸುತ್ತುಮುತ್ತಲ ಪ್ರದೇಶ ಜಲಾವೃತವಾಗಿ ದ್ವೀಪದಂತೆ ಗೋಚರಿಸುತ್ತಿದೆ.
ದೇವಸ್ಥಾನದ ಒಳಭಾಗದಲ್ಲಿ ನಾಲ್ಕೈದು ಅಡಿ ಯಷ್ಟು ನೀರು ತುಂಬಿದ್ದು ನಿತ್ಯದ ಕೆಲಸಕಾರ್ಯಗಳಿಗೆ ತೊಂದರೆಯುಂಟಾಗಿದೆ.
ಮಧೂರು ಕ್ಷೇತ್ರದ ಜೀರ್ಣೋ ದ್ಧಾರದ ಕೆಲಸಗಳು ಭರದಿಂದ ಸಾಗುತ್ತಿದ್ದು ದೇವಾ ಲಯದ ಕೆಲವು ಗುಡಿಗಳು, ಹಾಗೂ ಗರ್ಭಗುಡಿಯ ಸುತ್ತಲು ಕಟ್ಟಡವನ್ನು ತೆರವುಗೊಳಿಸಿದ್ದು ಮಳೆನೀರಿನಿಂದ ಮತ್ತಷ್ಟು ಒಳಾಂಗಣ ಕೆಸರುಮಯವಾಗುವ ಸಾಧ್ಯತೆ ಇದೆ. ದೇವಸ್ಥಾನದ ಪ್ರವೇಶ ದ್ವಾರದ ಬಳಿಯಿರುವ ಅಂಗಡಿಗಳಿಗೂ ನೀರು ಹತ್ತಿದ್ದು ಸಮೀಪದ ಗದ್ದೆಗಳೂ ತುಂಬಿ ತುಳುಕುತ್ತಿರುವುದು ಕಾಣಬಹುದು.