ಪಂಬಾ ಮರುನಿರ್ಮಾಣಕ್ಕೆ ಹರಸಾಹಸ
Team Udayavani, Jan 12, 2019, 4:17 AM IST
ಶಬರಿಮಲೆ: ಪಂದಲ ರಾಜನಿಗೆ ಅಯ್ಯಪ್ಪ ಸ್ವಾಮಿ ಮಗುವಿನ ರೂಪದಲ್ಲಿ ಸಿಕ್ಕಿದ ಸ್ಥಳ ಪಂಬಾ ನದಿಯ ತೀರ. ಆದ್ದರಿಂದ ಧಾರ್ಮಿಕ ಮಹತ್ವ ಪಡೆದಿರುವ ಪಂಬಾ ನದಿಯ ಶುಚಿ ಕಾರ್ಯವನ್ನು ಪ್ರಕೃತಿಯೇ ಮಾಡಿಯಾಗಿದೆ. ಆದರೆ ಇದರಿಂದ ಸರ್ವವನ್ನೂ ಕಳೆದು ಕೊಂಡು ನಿಂತಿರುವ ಪಂಬಾ ಪ್ರದೇಶ ಈಗ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ.
ವರ್ಷಗಳ ಹಿಂದೆ ಇದ್ದಂತೆ ಪಂಬಾ ಈಗಿಲ್ಲ. “ಮಲೆ ಚೌಟಿ’ ಬರುವ ಭಕ್ತರ ವಿಶ್ರಾಂತಿಗಾಗಿ ನಿರ್ಮಿಸಿದ್ದ ಬೃಹತ್ ಸಭಾಂಗಣ ಸಂಪೂರ್ಣ ಕೊಚ್ಚಿ ಹೊಗಿದೆ. ಉಪಾಹಾರ ಒದಗಿಸುತ್ತಿದ್ದ ಅಂಗಡಿಗಳು ನೆಲಸಮಗೊಂಡಿವೆ. ಮರಳು ಹಾಸಲಾಗಿದೆ. ಪಂಬಾ ಮರು ನಿರ್ಮಾಣ ವೇಗ ಪಡೆಯಬೇಕಿದೆ.
ಥರಗುಟ್ಟುವ ಚಳಿಯಲ್ಲಿ ಪಂಬಾದ ತಣ್ಣಗಿನ ನೀರಿನಲ್ಲಿ ಮಿಂದು ಬರುವ ಭಕ್ತರಿಗಾಗಿ ಸಣ್ಣ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ. ಮೇಲೆ ಶೀಟ್ ಹಾಕಿದ್ದು ಬಿಟ್ಟರೆ, ಬೇರಾವ ಸೌಕರ್ಯವೂ ಇಲ್ಲಿಲ್ಲ. 48 ಕಿ.ಮೀ. ಕಾಡಿನ ಹಾದಿಯಾಗಿ ಬರುವ ಭಕ್ತರು ಮರಳಿನ ಮೇಲೆ, ಮೂಲ ಸೌಕರ್ಯವೇ ಇಲ್ಲದ ಶೆಡ್ನಡಿ ಮಲಗಿಕೊಳ್ಳುವ ದೃಶ್ಯ ಪಂಬಾದಲ್ಲಿ ಕಾಣಸಿಗುತ್ತದೆ. ನಡುವಲ್ಲಿ ಇರುಮುಡಿಗಳನ್ನು ರಾಶಿ ಇರಿಸಿ, ಸುತ್ತಮುತ್ತ ಭಕ್ತರು ರಾಶಿ ಬಿದ್ದಂತೆ ಮಲಗಿರುತ್ತಾರೆ.
ಬೀರಿಗಳು
ಮಹಾಮಳೆಗೆ ಮೊದಲು ಅಂಗಡಿ ಗಳಿದ್ದ ಜಾಗದಲ್ಲಿ ಈಗ ಬೀರಿಗಳನ್ನು ನಿರ್ಮಿಸಲಾಗಿದೆ. ಭಕ್ತರು ಬಾಡಿಗೆ ತೆತ್ತು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇದು ತಕ್ಕಮಟ್ಟಿಗೆ ಉತ್ತಮವಾಗಿದೆ. ಸಣ್ಣ ಮಟ್ಟಿಗೆ ಉಪಾಹಾರದ ವ್ಯವಸ್ಥೆಯೂ ಇಲ್ಲಿ ಲಭ್ಯ.
ಪಂಬಾ ನದಿ
ಒಂದೊಮ್ಮೆ ಪಂಬಾ ಮಲಿನ ಗೊಂಡಿತ್ತು. ಧಾರ್ಮಿಕ ಹಿನ್ನೆಲೆ ವಿನಾ ಸ್ನಾನ ಕಷ್ಟ ಎಂಬಂತಿತ್ತು. ಈಗ ಪಂಬಾ ನದಿ ಶುಚಿಯಾಗಿದೆ. ಅಲ್ಲಲ್ಲಿ ಪೊಲೀಸರು ಕುಳಿತಿದ್ದು, ನದಿಯ ಪಾವಿತ್ರ್ಯಕ್ಕೆ ಒತ್ತು ನೀಡು ತ್ತಿ¨ªರೆ. ನದಿ ನೀರಿನಲ್ಲಿ ಸ್ನಾನದ ವೇಳೆ ಸಾಬೂನು ಬಳಕೆ ನಿಷೇಧ. ಒಂದು ವೇಳೆ ಪತ್ತೆಯಾದರೆ ತತ್ಕ್ಷಣ ಪೊಲೀಸರು ಆಗಮಿಸಿ, ಸಾಬೂನು ಕಿತ್ತುಕೊಳ್ಳುತ್ತಾರೆ. ವ್ರತಧಾರಿಗಳು ಉಡುವ ಕಪ್ಪು ವಸ್ತ್ರ ವನ್ನು ಎಸೆಯಬಾರದು ಎಂಬ ನಿರ್ಬಂಧವೂ ಇದೆ. ಆದರೂ ಕಪ್ಪು ವಸ್ತ್ರಗಳು ತೇಲಿ ಹೋಗುತ್ತಿರುವುದು ಕಂಡುಬರುತ್ತದೆ. ಪವಿತ್ರ ಪಂಬಾ ನದಿಯಂತೆ ಅಲುದಾ, ಭಸ್ಮಕೊಳಗಳು ಶುದ್ಧ ಗೊಂಡಿರುವುದನ್ನು ಕಾಣಬಹುದು. ಈ ಎಲ್ಲ ನೀರಿನ ಮೂಲಗಳ ಶುಚಿತ್ವಕ್ಕಾಗಿಯೇ ಮಳೆ ಪ್ರವಾಹದ ರೂಪ ಪಡೆದುಕೊಂಡಿತೋ ಎಂಬ ಮಾತುಗಳು ಕೇಳಿಬರುತ್ತಿವೆ.
ಪಂಬಾ ನದಿ ತೀರದಲ್ಲಿ ಪಾವಿತ್ರ್ಯ ಉಳಿಸಿಕೊಳ್ಳಲು ಕೇರಳ ಸರಕಾರ ಅಥವಾ ದೇವಸ್ವಂ ಬೋರ್ಡ್ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಸಮರ್ಪಕ ಶೌಚಾಲಯಗಳ ನಿರ್ಮಾಣ, ಭಕ್ತರ ವಿಶ್ರಾಂತಿಗಾಗಿ ಹಾಗೂ ಚಳಿಯಿಂದ ರಕ್ಷಣೆ ಪಡೆಯಲು ಸಭಾಗೃಹ ನಿರ್ಮಾಣ, ಉಪಾಹಾರಕ್ಕಾಗಿ ಅಂಗಡಿಗಳ ನಿರ್ಮಾಣಕ್ಕೆ ಉತ್ತೇಜನ ಇತ್ಯಾದಿ ಕೆಲಸಗಳು ಶೀಘ್ರ ನಡೆಯಬೇಕಾಗಿದೆ.
ಪಂಬಾ ನದಿಗೆ ತಡೆಗೋಡೆಯಾಗಿ ಮರಳಿನ ಗೋಣಿ ಚೀಲಗಳನ್ನು ಪೇರಿಸಿ ಇಡಲಾಗಿದೆ. ಭಾರೀ ಎತ್ತರಕ್ಕೆ ಈ ಮರಳಿನ ಚೀಲಗಳನ್ನು ಇರಿಸಿದ್ದು, ಇದಕ್ಕೆ ಶಾಶ್ವತ ವ್ಯವಸ್ಥೆಯ ಅಗತ್ಯವೂ ಇದೆ. ಇದು ಪ್ರವಾಹ ಸಂದರ್ಭ ಬಂದ ಮರಳು. ಮುಂದಿನ ಮಳೆಗಾಲದ ಹೊತ್ತಿಗೆ ಮರಳಿನ ರಾಶಿಗಳು ಕುಸಿದು ಬೀಳುವ ಅಪಾಯವೂ ಇದೆ.
ಗಣೇಶ್ ಎನ್.ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ