ಕೇಂದ್ರ, ರಾಜ್ಯ ಸರಕಾರಗಳ ದುರಾಡಳಿತದಿಂದ ಕಂಗೆಟ್ಟ ಜನತೆ: ಹಕೀಂ
Team Udayavani, Aug 13, 2017, 7:40 AM IST
ಮಂಜೇಶ್ವರ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ತಮ್ಮನ್ನು ಆಯ್ಕೆ ಮಾಡಿದ ಜನತೆಯ ಮೇಲೆ ತುಘಲಕ್ ಆಡಳಿತ ಶೈಲಿಯ ಮೂಲಕ ನಿತ್ಯ ನರಕ ಯಾತನೆಯನ್ನು ನೀಡುತ್ತಿದೆಯೆಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರಿ ಹಕೀಂ ಕುನ್ನಿಲ್ ಆರೋಪಿಸಿದ್ದಾರೆ.
60 ತಿಂಗಳಲ್ಲಿ ದೇಶದ ಸಂಪೂರ್ಣ ಮುಖವಾಡ ವನ್ನು ಬದಲಾಯಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಬದಲಾವಣೆ ತರುವ ಬದಲು ಯು.ಪಿ.ಎ. ಸರಕಾರ ಜ್ಯಾರಿಗೆ ತಂದಿದ್ದ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸುತ್ತಿದೆ ಇಲ್ಲವೇ ಹೆಸರು ಬದಲಾಯಿಸಿ ಅದೇ ರೀತಿ ಮುನ್ನಡೆಸುತ್ತಿದೆ ಎಂದರು.
ದೇಶ ಇದುವರೆಗೂ ಕಾಯ್ದುಕೊಂಡು ಬಂದ ಸಕಲ ರಾಜಕೀಯ ಸದಾಚಾರಗಳನ್ನು ಗಾಳಿಗೆ ತೂರಿ ಅನಾಗರಿಕ ರೀತಿಯ ಆಡಳಿತವನ್ನು ನಡೆಸುತ್ತಿರುವ ಕೇಂದ್ರ ಸರಕಾರವು ಆಡಳಿತ ಕಾಲಾವಧಿಯ ಕೊನೆ ಯಲ್ಲಿ ಭಾವಾನಾತ್ಮಕ ವಿಷಯಗಳನ್ನು ಕೆದಕಿ ಮತ್ತೂಮ್ಮೆ ಅಧಿಕಾರಕ್ಕೇರುವ ತಿರುಕನ ಕನಸು ಕಾಣುತ್ತಿದೆ ಎಂದರು.
ಕಾಂಗ್ರೆಸ್ ಇಷ್ಟು ವರ್ಷಗಳ ಆಡಳಿತಾವಧಿಯಲ್ಲಿ ಏನು ಮಾಡಿದೆಯೆಂದು ಪ್ರಶ್ನಿಸುತ್ತಿರುವ ಮೋದಿಭಕ್ತರು ಅನುಭವಿಸುತ್ತಿರುವ ಸಕಲ ಸೌಕರ್ಯಗಳೂ ಕಾಂಗ್ರೆಸ್ ಆಡಳಿತದ ಕೊಡುಗೆ ಎಂಬುದನ್ನು ಮರೆತಿದ್ದಾರೆ. ಯಾವ ಹೊಸ ಕಾರ್ಯಕ್ರಮಗಳಿಗೂ ಕನಿಷ್ಠ ಶಂಕುಸ್ಥಾಪನೆ ಮಾಡಲು ಕೂಡಾ ಸಾಧ್ಯವಾಗದ ಮೋದಿಯವರು ಯುಪಿಎ ಕಾಲಾವಧಿಯ ಯೋಜನೆಗಳನ್ನು ಉದ್ಘಾಟಿ ಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.
ಸರಿಪಡಿಸಲಾಗದಷ್ಟು ಹಾನಿ: ಸದಾ ಕಾಲವೂ ವಿದೇಶದಲ್ಲಿರುವ ಎನ್ಆರ್ಐ ಪ್ರಧಾನಿಯ ವಿದೇಶ ಯಾತ್ರೆ ಗಳಿಂದ ದೇಶಕ್ಕೆ ನಯಾ ಪೈಸೆಯ ಪ್ರಯೋಜನ ಲಭಿಸದಿದ್ದರೂ ದೇಶಕ್ಕೆ ಭಾರೀ ಹೊರೆಯಂತೂ ಉಂಟಾಗಿದೆ. ಅವೈಜ್ಞಾನಿಕ ಕರೆನ್ಸಿ ರದ್ಧತಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಸರಿಪಡಿಸಲಾಗದಷ್ಟು ಹಾನಿಗೀಡಾಗಿದೆ ಎಂದರು.
ಅವರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ವರ್ಕಾಡಿ ಮಜೀರ್ ಪಳ್ಳದಲ್ಲಿ ಜರಗಿದ ಸಾಯಂ ಧರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನೇತಾರರಾದ ಸೋಮಶೇಖರ ಜೆ.ಎಸ್., ಎ.ಪ್ರಕಾಶ್ ನಾೖಕ್, ಇಬ್ರಾಹಿಂ ಐಆರ್ಡಿಪಿ, ಸತ್ಯನ್ ಸಿ. ಉಪ್ಪಳ, ಮೊಹಮ್ಮದ್ ಮಜಾಲ್, ಸತ್ಯನಾರಾಯಣ ಕಲ್ಲೂರಾಯ, ಕಾಯಿಂಞ ಹಾಜಿ ಅರಿಮಲೆ, ನಾಸರ್ ಮೊಗ್ರಾಲ್, ಪಿ.ಎಂ.ಖಾದರ್ ಹಾಜಿ, ಮಂಜುನಾಥ ಪ್ರಸಾದ್ ರೈ, ಕೆ. ಸದಾಶಿವ, ಮೊಹಮ್ಮದ್ ಕಂಚಿಲ, ಮಮತಾ ದಿವಾಕರ್, ಶಾಂತಾ ಆರ್ ನಾೖಕ್, ಶಂಷಾದ್ ಶುಕೂರ್, ದಾಮೋದರ ಮಾಸ್ತರ್, ಶಶಿಧರ ನಾೖಕ್, ನಾರಾಯಣ ಏದಾರು, ರಾಘವೇಂದ್ರ ಭಟ್, ಜಿ.ರಾಮ ಭಟ್, ಬಿ.ಕೆ. ಮೊಹಮ್ಮದ್, ಟಿ.ಎಂ. ಕುಂಞ, ಇಕ್ಬಾಲ್ ಕಳಿಯೂರು, ಶರೀಫ್ ಅರಿಬೈಲು, ಸುಧಾಕರ ಉಜಿರೆ, ಹಮೀದ್ ಕಣಿಯೂರು, ಫ್ರಾನ್ಸಿಸ್ ಡಿ’ಸೋಜಾ, ವಿ.ಪಿ. ಮಹಾರಾಜ, ಮುಸ್ತಾಕ್ ಹಾಜಿ, ಅಬ್ದುಲ್ ಶೆಕೂರ್ ಮುಂತಾದವರು ಉಪಸ್ಥಿತರಿದ್ದರು, ದಿವಾಕರ ಎಸ್.ಜೆ. ಸ್ವಾಗತಿಸಿ, ಪಿ. ಸೋಮಪ್ಪ ವಂದಿಸಿದರು.