ಪ್ರವಾಸೋದ್ಯಮ ನಕಾಶೆಯಲ್ಲಿ ಕುಂಬಳೆ ಪರಿಗಣನೆಯಿಲ್ಲ
ಪ್ರವಾಸೋದ್ಯಮ ಇಲಾಖೆಯಿಂದ ನಿರ್ಲಕ್ಷ್ಯ
Team Udayavani, Jul 16, 2019, 5:14 AM IST
ಕಾಸರಗೋಡು: ಐತಿಹಾಸಿಕ ಮಹತ್ವವುಳ್ಳ ಪ್ರದೇಶವಾಗಿರುವ ಮತ್ತು ಸಾಕಷ್ಟು ಸಾಧ್ಯತೆಗಳಿರುವ ಕುಂಬಳೆ ಪ್ರದೇಶವನ್ನು ಪ್ರವಾಸೋದ್ಯಮ ಅಭಿವೃದ್ಧಿ ನಕ್ಷೆಯಲ್ಲಿ ಪರಿಗಣಿಸದೆ ಅವಗಣಿಸಲಾಗಿದೆ. ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಹಲವಾರು ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸೂಕ್ತ ಸ್ಥಳಗಳಿವೆ.
ಇತಿಹಾಸ ಪ್ರಸಿದ್ಧವಾದ ಆರಿಕ್ಕಾಡಿ ಕೋಟೆ, ಸರೋಪರ ದೇವಾಲಯ ಅನಂತಪುರ ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರ, ಮೊಗ್ರಾಲ್ ಬೀಚ್, ಆರಿಕ್ಕಾಡಿ, ಕೊಪ್ಪಳ, ಕುಂಬಳೆ, ಮೊಗ್ರಾಲ್ ಹೊಳೆ ಗಳು, ಕಿದೂರು ಪಕ್ಷಿಧಾಮ ಮೊದಲಾದವು ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಕುಂಬಳೆ ಯಕ್ಷಗಾನದ ತವರೂರು. ಯಕ್ಷಗಾನದ ಪಿತಾಮಹ ಪಾರ್ತಿ ಸುಬ್ಬನ ಜನ್ಮಸ್ಥಳ. ಹೀಗಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸ ದಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಾಗ್ರಾಮ
ಐತಿಹಾಸಿಕ ಮಹತ್ವವುಳ್ಳ ಆರಿಕ್ಕಾಡಿ ಕೋಟೆ ಯನ್ನು ಕಲಾಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲು ಮಾಜಿ ಸಚಿವರಾಗಿದ್ದ ದಿ| ಚೆರ್ಕಳಂ ಅಬ್ದುಲ್ಲ ಪ್ರಯತ್ನಿಸಿದ್ದರು. ರಾಜ್ಯ ಟೂರಿಸಂ ಇಲಾಖೆ, ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದರು.
ಇಕೋ ಟೂರಿಸಂ
ಅಬ್ಟಾಸ್ ಆರಿಕ್ಕಾಡಿ ಪಂಚಾಯತ್ ಅಧ್ಯಕ್ಷ ರಾಗಿದ್ದಾಗ ಕೇಂದ್ರ ಸರಕಾರದ ನೆರವಿನೊಂದಿಗೆ ಕುಂಬಳೆ, ಆರಿಕ್ಕಾಡಿ, ಮೊಗ್ರಾಲ್ ಹೊಳೆಯನ್ನು ಕೇಂದ್ರವಾಗಿಸಿ ಇಕೋ ಟೂರಿಸಂ ಯೋಜನೆಗೆ ಪ್ರಯತ್ನಿಸಿದ್ದರು. ಕಾಂಡ್ಲಾ ಕಾಡುಗಲ ಸಂರಕ್ಷಣೆ, ಬೋಟಿಂಗ್ ಸರ್ವೀಸ್, ಲ್ಯಾಂಡಿಂಗ್ ಸೆಂಟರ್, ಮಕ್ಕಳ ಪಾರ್ಕ್, ಟೂರಿಸಂ ಇನಾ#ರ್ಮೇಶನ್ ಸೆಂಟರ್ ಮೊದಲಾದವುಗಳನ್ನು ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಇದು ಕೂಡ ಸಾಕಾರಗೊಂಡಿಲ್ಲ.
“ಕುಂಬಳಂಗಿ’ ಯೋಜನೆ
ಗುಡಿ ಕೈಗಾರಿಕೆ, ಗ್ರಾಮ ನೈರ್ಮಲ್ಯದೊಂದಿಗೆ ಗ್ರಾಮೀಣ ಸಂಸ್ಕೃತಿಯ ಬೇರುಗಳನ್ನು ಗಟ್ಟಿ ಗೊಳಿಸಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ಉದ್ದೇಶಿಸಿದ್ದ ಮಹತ್ವಾಕಾಂಕ್ಷಿ ಯೋಜನೆಯೊಂದು ಜಾರಿಗೊಳ್ಳದೆ ಮಾದರಿ ಗ್ರಾಮದ ಕನಸು ನನಸಾಗಿಸದೆ ಮಂಕಾಗಿದೆ. ತುಳು ಜನ ಸಂಸ್ಕೃತಿಯ ಬಾಹುಳ್ಯವಿರುವ ಕುಂಬಳೆಯಲ್ಲಿ ಜಾರಿಯಾಗಿ ಮಾದರಿ ಗ್ರಾಮದ ಮೂಲಕ ರಾಜ್ಯದ ಏಕೈಕ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕಿದ್ದ ಕುಂಬಳಾಂಗಿ ಮಾದರಿ ಪ್ರವಾಸಿ ಗ್ರಾಮವು ಸಾಕಾರಗೊಳ್ಳದೆ ತೆರೆಮರೆಗೆ ಸರಿದಿದೆ.
ಕೇರಳ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯು 2004 ರಲ್ಲಿ ಕುಂಬಳೆ ಪ್ರದೇಶವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸುವ ಮಹತ್ತರ ಯೋಜನೆಯ ಬಗ್ಗೆ ಚಿಂತಿಸಿತ್ತು. ಮಾತ್ರವಲ್ಲದೆ ಕುಂಬಳಾಂಗಿ ಯೋಜನೆ ಮೂಲಕ ಈ ಪ್ರದೇಶವನ್ನು ರಾಜ್ಯದ ಏಕೈಕೆ ಮಾದರಿ ಗ್ರಾಮವನ್ನಾಗಿಸುವ ಮಂತ್ರವನ್ನು ಘೋಷಿಸಿತ್ತು. ಸ್ವತ್ಛ ಗ್ರಾಮದ ಪರಿಕಲ್ಪನೆ, ಗ್ರಾಮ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಗ್ರಾಮೀಣ ಕರಕುಶಲ ವಸ್ತುಗಳ ಮಾರಾಟದ ಮೂಲಕ ಗ್ರಾಮ ವಾಸಿಗಳ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಯೋಜನೆಯು ಇದಾಗಿತ್ತು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಸಿದ್ಧ ಪಡಿಸಿದ್ದ ಹಲವು ವೈಶಿಷ್ಟéಗಳನ್ನು ಒಳಗೊಂಡ ಮಾದರಿ ಪ್ರವಾಸಿ ಗ್ರಾಮ ಯೋಜನೆಗೆ ಕುಂಬಳಾಂಗಿ ಎಂಬ ಹೆಸರನ್ನು ನೀಡಲಾಗಿತ್ತು. ಮಹತ್ತರ ಯೋಜನೆಯನ್ನು ಸಾಕಾರಗೊಳಿಸುವ ಸದುದ್ದೇಶ ದಿಂದ ಅನುಭವಿಗಳ ಮೂಲಕ ವರದಿಯನ್ನು ಸಿದ್ಧಪಡಿಸಿ, ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿತ್ತು. ಆದರೆ ದಶಕಗಳು ಕಳೆದರೂ ಯೋಜನೆ ಅನುಷ್ಠಾನಗೊಳ್ಳದೆ ಗ್ರಾಮ ವಾಸಿಗಳ ಆರ್ಥಿಕ ಸಬಲೀಕರಣದ ಕನಸು ನನಸಾಗದೆ ಉಳಿದಿದೆ. ವಿವಿಧ ಮಹತ್ತರ ಮಜಲುಗಳುಳ್ಳ ಕುಂಬಳೆ ಗ್ರಾಮದ ಕನಸಿಗೆ 13 ವರ್ಷ ತುಂಬಿದೆ. ಹಲವು ಪ್ರವಾಸಿ ತಾಣಗಳಿರುವ ಕುಂಬಳೆಯು ನದಿಗಳು, ಹಿನ್ನೀರ ಪ್ರದೇಶಗಳಿಂದ ಕೂಡಿದ್ದು, ಇತಿಹಾಸ ಪ್ರಸಿದ್ಧ ಅರಿಕ್ಕಾಡಿಕೋಟೆ, ಅನಂತಪುರ ಸರೋವರ ಕ್ಷೇತ್ರ, ಮುಜಂಗಾವು ಪಾರ್ಥಸಾರಥಿ ಕ್ಷೇತ್ರ, ಕುಂಬಳೆ ಗೋಪಾಲಕೃಷ್ಣ ಕ್ಷೇತ್ರ ಸೇರಿದಂತೆ ಬೇಳ ಶೋಕಮಾತಾ ಇಗರ್ಜಿ, ಕುಂಬೋಳ್ ಮಸೀದಿಯಂತಹ ಧಾರ್ಮಿಕ ಕೇಂದ್ರಗಳು ಇಲ್ಲಿವೆ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಯಕ್ಷಗಾನ, ಪಕ್ಷಿಪ್ಪಾಟ್ಟುಗಳು, ದೈವಕೋಲಗಳು ಇಲ್ಲಿನ ವೈಶಿಷ್ಟéಗಳು. ಸಾಂಪ್ರದಾಯಿಕ ಗ್ರಾಮೀಣ ಜನ ಜೀವನವನ್ನು ಪ್ರವಾಸಿಗರು ಅರ್ಥೈಸಲು ಸಹಕಾರಿ ಯಾಗುವಂತೆ ಕುಂಬಳಾಂಗಿ ಯೋಜನೆಯನ್ನು ರೂಪಿಸಲಾಗಿತ್ತು. 2012ರ ಕಾಸರಗೋಡು ಅಭಿವೃದ್ಧಿ ವರದಿಯಲ್ಲೂ ವಿನೂತನ ಕುಂಬಳಾಂಗಿ ಮಾದರಿ ಗ್ರಾಮದ ಸಾಕಾರಕ್ಕೆ ಪ್ರಾಥಮಿಕ ಹಂತದಲ್ಲಿ 2 ಕೋಟಿ ರೂ.ಗಳನ್ನು ಮೀಸಲಿಡುವಂತೆ
ಸರಕಾರಕ್ಕೆ ಸೂಚಿಸಲಾಗಿತ್ತು. ಯೋಜನೆಯ ಪೂರ್ವಭಾವಿ ಯಾಗಿ ಅರಿಕ್ಕಾಡಿ ಕೋಟೆಯ ನವೀಕರಣ, ಸಮೀಪದಲ್ಲಿರುವ ಹಿನ್ನೀರ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ದೋಣಿ ವಿಹಾರ, ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ಕಲಾ ಗ್ರಾಮ, ಪ್ರವಾಸಿಗರ ತಂಗುವಿಕೆಗೆ ಹೋಂ ಸ್ಟೇ ನಿರ್ಮಾಣವನ್ನು ವರದಿಯಲ್ಲಿ ಸೂಚಿಸಲಾಗಿತ್ತು.
ಆದರೆ ವರದಿಯಲ್ಲಿ ಸೂಚಿಸಲ್ಪಟ್ಟ ಯಾವುದೇ ಅಭಿವೃದ್ಧಿ ಕಾರ್ಯಗಳು ಈಡೇರದೆ ಉಳಿದಿದೆ. ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆ ಸಹಿತ ಫಾರ್ಮ್ ಟೂರಿಸಂ ಹಾಗೂ ಇಕೋ ಟೂರಿಸಂಗೆ ಒತ್ತು ನೀಡಬೇಕಿದ್ದ ಕುಂಬಳಾಂಗಿ ಯೋಜನೆಯು ಇನ್ನಾದರೂ ಕಾರ್ಯರೂಪಕ್ಕೆ ತರುವಲ್ಲಿ ಜನಪ್ರತಿನಿ ಧಿಗಳು ಪ್ರಯತ್ನಿಸಬೇಕಿದೆ.
ಶುಭ ಸೂಚಕ : ಹೀಗಿರುವಂತೆ ಆರಿಕ್ಕಾಡಿ ಕೊಪ್ಪಳಂ ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಟೂರಿಸಂ ಯೋಜನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ ಸೇರ್ಪಡೆಗೊಳಿಸಿ ಪ್ರಾರಂಭಿಕ ಪ್ರಕ್ರಿಯೆ ಆರಂಭಿಸಿದ್ದು ಮತ್ತು ಕೇಂದ್ರದ ನೆರವಿನೊಂದಿಗೆ ಅನಂತಪುರದಲ್ಲಿ ಒಂದು ಕೋಟಿ ರೂ. ಅಭಿವೃದ್ಧಿ ಯೋಜನೆಯ ಬಗ್ಗೆ ಚರ್ಚೆ ಶುಭಸೂಚಕವೆನ್ನುವುದು ಸ್ಥಳೀಯರ ಅನಿಸಿಕೆ.
ನೈಸರ್ಗಿಕ ಸೌಂದರ್ಯ
ಗ್ರಾಮೀಣ ಜನಜೀವನವನ್ನು ಬಿಂಬಿಸಿ, ಪ್ರಕೃತಿಗೆ ಅತೀ ಸಮೀಪವಾದ ಕುಂಬಳಾಂಗಿ ಯೋಜನೆಯು ಪರಿಸರ ಸಾಮೀಪ್ಯ ಸೂಚಿಸುವುದಲ್ಲದೆ, ಹಾಯಿ ದೋಣಿ, ಬೋಟ್ ಹೌಸ್ ವ್ಯವಸ್ಥೆಗಳ ಮೂಲಕ ನೈಸರ್ಗಿಕ ಸೌಂದರ್ಯವನ್ನು ಪ್ರವಾಸಿಗರಿಗೆ ಸವಿಯಲು ಆನಂದಿಸಲು ನೆರವಾಗುವುದು. ಪ್ರಥಮ ಹಂತದಲ್ಲಿ ನದಿ ಹಿನ್ನೀರ ಪ್ರದೇಶದ ಅಭಿವೃದ್ಧಿ, ಪ್ರೇಕ್ಷಣೀಯ ಸ್ಥಳಗಳ ಮೇಲ್ದರ್ಜೆ ನಡೆಯಲಿದೆ. ಪ್ರವಾಸಿಗರಿಗೆ ಸಹಾಯಕವಾಗುವಂತೆ ರೆಸ್ಟ್ ಹೌಸ್, ಹೋಂ ಸ್ಟೇ ನಿರ್ಮಾಣವು ನೆರವೇರಲಿದೆ. ಕುಂಬಳೆಯ ಶಿರಿಯಾ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ತೀರ ಪ್ರದೇಶದ ಕಾಂಡ್ಲಾವನ ಸಹಿತ ನದಿ ಮಧ್ಯೆ ದ್ವೀಪದಂತಿರುವ ಪ್ರದೇಶಗಳನ್ನು ಯಥಾ ಸ್ಥಿತಿಯಲ್ಲಿರಿಸಿ ನೈಸರ್ಗಿಕ ಸೌಂದರ್ಯವನ್ನು ಕಾಪಾಡಲಾಗುವುದು. ಅನಂತಪುರ ಸರೋವರ ಕ್ಷೇತ್ರವನ್ನು ಪ್ರಾಥಮಿಕ ಹಂತದ ಯೋಜನೆಯಲ್ಲಿ ಒಳಪಡಿಸಲಾಗಿದ್ದು, ಅರಿಕ್ಕಾಡಿ ಕೋಟೆಯನ್ನು ಸಂರಕ್ಷಿಸಿ ಪ್ರವಾಸಿ ವೀಕ್ಷಣೆಗೆ ಯೋಗ್ಯವಾಗಿಸುವುದಾಗಿ ಸರ್ವೇಕಾರ್ಯವನ್ನು ಕೈಗೊಂಡ ಕೇರಳ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕಲ್ಲಿಕೋಟೆಯ ರಾಧಾಕೃಷ್ಣನ್ ಅವರು ಈ ಹಿಂದೆ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು