“ಹಿಂದಿರುಗಿದ ಪರಿಹಾರದ ಮೊತ್ತ ಮರಳಿ ಸಂತ್ರಸ್ತರ ಖಾತೆಗೆ’
Team Udayavani, Jun 10, 2019, 6:10 AM IST
ಮಡಿಕೇರಿ: ಬ್ಯಾಂಕ್ ಖಾತೆ ಗಳಿಗೆ ಆಧಾರ್ ಜೋಡಣೆ ಆಗದ ಮತ್ತು ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಕಾರಣ 2,191 ಪ್ರಕರಣಗಳಲ್ಲಿ ಸಂತ್ರಸ್ತರ ಪರಿಹಾರ ಧನ ಬ್ಯಾಂಕ್ ಖಾತೆಯಿಂದ ವಾಪಸ್ಸಾಗಿದ್ದು, ಮರು ಜಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಆಗದ ಮತ್ತು ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಕಾರಣ 2,191 ಪ್ರಕರಣಗಳಲ್ಲಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಸರಕಾರದಿಂದ ಹಣವನ್ನು ಜಮೆ ಮಾಡಲಾಗಿದ್ದರು ರೂ. 2.58 ಕೋಟಿ ವಾಪಸ್ಸಾಗಿರುತ್ತದೆ.2,191 ಪ್ರಕರಣಗಳ ಪಟ್ಟಿಯನ್ನು ಕೊಡಗು ಜಿಲ್ಲಾ ವೆಬ್ಸೈಟ್ ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚು ರಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಬೆಳೆ ಪರಿಹಾರ ಪಾವತಿಯಾಗಿರದ ಫಲಾನುಭವಿಗಳು ಸದರಿ ಪಟ್ಟಿಯನ್ನು ಪರಿಶೀಲಿಸಿಕೊಂಡು, ತಮ್ಮ ಖಾತೆಗೆ ಹಣ ಜಮೆಯಾಗದಿರುವ ಕಾರಣವನ್ನು ತಿಳಿದು, ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗಳಿಗೆ ಜೋಡಣೆಯಾಗದಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕನ್ನು ಸಂಪರ್ಕಿಸಿ ಆಧಾರ್ ಸಂಖ್ಯೆ ಜೋಡಣೆಗೆ ಕ್ರಮ ವಹಿಸುವುದು.
ಅದೇ ರೀತಿ ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಪ್ರಕರಣಗಳಲ್ಲಿ ಸಂಬಂ ಧಪಟ್ಟ ಆಧಾರ್ ಕೇಂದ್ರಗಳಲ್ಲಿ (ನಾಡ ಕಚೇರಿಗಳು, ಗ್ರಾಮ ಪಂಚಾಯತ್ಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸ್ಪಂದನಾ ಕೇಂದ್ರಗಳಲ್ಲಿ) ಆಧಾರ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಕ್ರಮ ವಹಿಸುವುದು.
ಈ ಪ್ರಕ್ರಿಯೆ ಮುಗಿದ ನಂತರ ಹಣ ವಾಪಸ್ ಆದ ಪ್ರಕರಣಗಳಲ್ಲಿ ಫಲಾನುಭವಿಗಳ ಖಾತೆಗೆ ಹಣವನ್ನು ಮರು ಜಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ನೇರ ಪಾವತಿ
ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳಿಗೆ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು ಕೊಚ್ಚಿ ಹೋಗಿದ್ದು, ಕೆಲವು ಭಾಗಗಳಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ತುಂಬಿಕೊಂಡು ಕೆಲವು ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿದ ಪ್ರಕರಣಗಳಲ್ಲಿ ಸರಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ 33,920 ಸಂತ್ರಸ್ತರಿಗೆ 44.92 ಕೋಟಿ ರೂ.ಗಳನ್ನು ಸಂತ್ರಸ್ತರ ಆಧಾರ್ ಜೋಡಣೆ ಆದ ಬ್ಯಾಂಕ್ ಖಾತೆಗಳಿಗೆ ಆಧಾರ್ ಬೇಸ್ಡ್ ಪೇಮೆಂಟ್ ಮೂಲಕ ಜಮೆ ಮಾಡಲಾಗಿತ್ತು.