ಅಪಘಾತದಲ್ಲಿ ಗಾಯಕೊಂಡ ವ್ಯಕ್ತಿ ಮೃತ್ಯು : ನೂರಾರು ಮಂದಿಯಿಂದ ಅಂತಿಮ ನಮನ
Team Udayavani, May 18, 2019, 5:49 PM IST
ಬದಿಯಡ್ಕ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಾರಡ್ಕ ಪುಂಡಿಕಾಯಿ ನಿವಾಸಿಗೆ ನೂರಾರು ಮಂದಿಯ ಅಂತಿಮ ನಮನದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಹುಟ್ಟೂರಿನಲ್ಲಿ ನಿನ್ನೆ ತಡ ರಾತ್ರಿ ನಡೆದ ಅಂತ್ಯಕ್ರಿಯೆಯಲ್ಲಿ ವಿವಿದೆಡೆಯ ಹಲವು ಮಂದಿ ಭಾಗವಹಿಸಿದರು. ಕಳೆದ 11 ರಂದು ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಬೈಕ್ಗೆ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಪುಂಡಿಕಾಯಿ ನಿವಾಸಿ, ಮುಳ್ಳೇರಿಯದಲ್ಲಿ ವಾಸಿಸುವ, ಪಿಗ್ಮಿ ಸಂಗ್ರಾಹಕರಾದ ಚಂದ್ರಶೇಖರ ಶೆಟ್ಟಿ (50) ಗಾಯಗೊಂಡಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳಿಗೆ ಉಂಟಾದ ಹಾನಿಯಿಂದಾಗಿ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.
ನಿನ್ನೆ ಬೆಳಿಗ್ಗೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ನಾಗವೇಣಿ, ಪುತ್ರಿ ಸಂಚನಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತದೇಹವನ್ನು ಮುಳ್ಳೇರಿಯ ಪೇಟೆಯಲ್ಲಿ ಅಲ್ಪ ಹೊತ್ತು ಸಾರ್ವಜನಿಕ ದರ್ಶನಕ್ಕಿರಿಸಿದಾಗ ಮಹಿಳೆಯರ ಸಹಿತ ಹಲವು ಮಂದಿ ಅಂತಿಮ ನಮನ ಸಲ್ಲಿಸಿದರು.
ಅಂಗಾಗ ದಾನದ ಮೂಲಕ ಹಲವರಿಗೆ ಜೀವ ನೀಡಿದ ಚಂದ್ರಶೇಖರ
ಮೃತಪಟ್ಟ ಚಂದ್ರಶೇಖರ ಶೆಟ್ಟಿ ತನ್ನ ಅಂಗಾಂಗಗಳನ್ನು ದಾನ ಮಾಡಿ ಮಾದರಿಯಾಗಿದ್ದಾರೆ. ಇದರಿಂದ ಇವರು ಮೃತಪಟ್ಟರೂ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿದ್ದಾರೆ. ಈ ಮೊದಲೇ ಮಾಡಿಕೊಂಡಿದ್ದ ಒಪ್ಪಂದದಂತೆ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿದಾಗ ಅದು ಹಲವರ ಬದುಕಲ್ಲಿ ಬೆಳಕಾಯಿತು. ನಿನ್ನೆ ಸಂಜೆ 4.15 ಕ್ಕೆ ಅಂಗಾಗ ದಾನ ಪ್ರಕ್ರಿಯೆ ನಡೆದಿದೆ. ಹೃದಯ ವಾಲ್ಸ್ ಮತ್ತು ಲಿವರನ್ನು ಬೆಂಗಳೂರಿನ ಆಸ್ಪತ್ರೆಗೆ ವಿಮಾನ ಮೂಲಕ ಕಲುಹಿಸಿಕೊಡಲಾಯಿತು. ಇದಕ್ಕಾಗಿ ಸಂಜೆ ಮಂಗಳೂರಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಿಡ್ನಿಯೊಂದನ್ನು ಮಣಿಪಾಲದ ಕೆ.ಎಂಸಿ ಆಸ್ಪತ್ರೆಯ ರೋಗಿಗೆ ನೀಡಲಾಗಿದೆ. ಇನ್ನೊಂದು ಕಿಡ್ನಿಯನ್ನು ಮಂಗಳೂರಿನ ಆಸ್ಪತ್ರೆಯ ರೋಗಿಗೂ ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಲಾಗಿದೆ. ಕಣ್ಣನ್ನು ಸ್ಥಳೀಯ ರೋಗಿಗಳಿಗೆ ದಾನ ಮಾಡಲಾಗಿದೆ.
ಅಂಗಾಗ ದಾನ ನಡೆಸಲು ಇನ್ನು ಹಿಂಜರಿಯುತ್ತಿರುವ ಸಮಾಜದ ಮಧ್ಯೆ ತನ್ನ ಹೆಚ್ಚಿನೆಲ್ಲಾ ಅವಯವಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.