ಶಂಕರಾಚಾರ್ಯರ ಸಾಧನೆ ಅತ್ಯದ್ಭುತ:ಎಡನೀರು ಶ್ರೀ
ಶ್ರೀ ಶಂಕರ ಜಯಂತಿ ಉತ್ಸವ ಸಮಾರೋಪ ಸಮಾರಂಭ
Team Udayavani, Jun 8, 2019, 6:00 AM IST
ಕಾಸರಗೋಡು: ದೇಶದೆಲ್ಲೆಡೆ ಧಾರ್ಮಿಕ ಅರಾಜಕತೆ ತಲೆದೋರಿದ ಕಾಲದಲ್ಲಿ ಇಲ್ಲಿ ಧರ್ಮವನ್ನು ನಿಜಸ್ಥಿತಿಗೆ ತರವುದಕ್ಕೆ ಪರಮಾತ್ಮನ ಇಚ್ಛೆಯಂತೆ ಉದ್ಭವಿಸಿದವರು ಶ್ರೀ ಶಂಕರ ಭಗವದ್ಪಾದರು. ಕೇರಳದ ಕಾಲಡಿಯಲ್ಲಿ ಸಾಮಾನ್ಯ ಮನೆಯಲ್ಲಿ ಹುಟ್ಟಿದ ಅವರು ಇಡೀ ದೇಶವನ್ನು ಸುತ್ತಿ, ಚತುರ್ ಪೀಠವನ್ನು ಸ್ಥಾಪಿಸಿ ಧರ್ಮವನ್ನು ಸ್ಥಿತಿಗೊಳಿಸಿದ ರೀತಿ ಅದ್ಭುತವಾದುದು ಎಂದು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಹೇಳಿದರು.
ಅವರು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಶಂಕರ ತತ್ವ ಪ್ರಸಾರಾಭಿಯಾನಂ ಶೃಂಗೇರಿ ಶಂಕರ ಮಠ ಕೋಟೆಕಾರು ನೇತೃತ್ವದಲ್ಲಿ ಅಣಂಗೂರು ಶ್ರೀ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಜರಗಿದ ಶ್ರೀ ಶಂಕರ ಜಯಂತಿ ಉತ್ಸವದ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಆ ದೇವರು, ಈ ದೇವರು ಎಂಬ ಭೇದ ಕಲ್ಪನೆಗೆ ಅವಕಾಶವಿಲ್ಲದೆ ಎಲ್ಲಾ ದೇವರುಗಳ ಸ್ತೋತ್ರವನ್ನು ರಚಿಸುವ ಮೂಲಕ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಕಂಡ ಶಂಕರ ಭಗವದ್ಪಾದರು ಅದ್ವೈತ ಸಿದ್ಧಾಂತ ಮೂಲಕ ದೇಶವನ್ನೇ ಒಂದಾಗಿಸಿದವರು ಎಂದು ಶ್ರೀ ಗಳು ಹೇಳಿದರು.
ವೇದಮೂರ್ತಿ ಕುಂಟಾರು ರವೀಶ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವಾಗ್ಮಿ ಬ್ರಹ್ಮಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಸಮಾರೋಪ ಭಾಷಣ ಮಾಡಿದರು.
ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಎಂ.ಆರ್.ವಾಸುದೇವ, ಮನೋವೈದ್ಯ ಡಾ|ಕೆ.ಎಸ್.ಕಾರಂತ, ಕರಾವಳಿ ಕಾವಲು ಪಡೆಯ ಪೊಲೀಸ್ ವೃತ್ತ ನಿರೀಕ್ಷಕ ಪ್ರಮೋದ್ ಕುಮಾರ್, ಶಿವರಾಮ ಉಡುಪ ಬಾಳೆಕುದ್ರು, ಜ್ಯೋತಿಷಿ ಸಿ.ವಿ.ಪೊದುವಾಳ್, ಮಂಗಳೂರು ಎಂ.ಸಿ.ಎಫ್ನ ಡಿಜಿಎಂ ಕೀರ್ತನ್ ಕುಮಾರ್ ಲಾಡ್, ಕರ್ನಾಟಕ ಕೃಷಿ ಇಲಾಖೆಯ ಸಹಾಯಕ ಜಯರಾಜ್ ಪ್ರಕಾಶ್, ಬಿ.ಪಿ.ವೆಂಕಟ್ರಮಣ ಬೀರಂತಬೈಲು, ನ್ಯಾಯವಾದಿ ಬಾಲಕೃಷ್ಣ ನಾಯರ್, ಧರ್ಮೇಂದ್ರ ಆಚಾರ್ಯ, ಸುರೇಶ್ ನಾೖಕ್ ಕೂಡ್ಲು, ಶಂಕರ ಹೆಗ್ಡೆ ಕಾಂಞಂಗಾಡ್ ಮೊದಲಾದವರು ಉಪಸ್ಥಿತರಿದ್ದರು. ನರೇಶ್ ಮಲ್ಲಿಗೆಮಾಡು ವಂದಿಸಿದರು. ನಿತ್ಯಾನಂದ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.