ಆದೇಶ ರದ್ದತಿಗೆ ಪ್ರಧಾನಿ, ರಾಷ್ಟ್ರಪತಿಗೆ ಮನವಿ
Team Udayavani, Jun 3, 2018, 6:00 AM IST
ಕಾಸರಗೋಡು: ಕೇರಳ ಸರಕಾರ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವನ್ನು ಪ್ರತಿಭಟಿಸಿ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನದ ಬಳಿಕ ಮನವಿಯನ್ನು ಕೇರಳ ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಸಲ್ಲಿಸಲು ತೀರ್ಮಾನಿಸಿದೆ.
ಕನ್ನಡ ಅಧ್ಯಾಪಕ ಭವನದಲ್ಲಿ ಶನಿವಾರ ನಡೆದ ಕನ್ನಡ ಹೋರಾಟ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಈ ಆದೇಶದ ಮೂಲಕ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರು ಅನುಭವಿಸುವ ವಿವಿಧ ಸಮಸ್ಯೆಗಳು ಮತ್ತು ಕಚೇರಿಗೆ ಯಾವುದೇ ಆದೇಶದ ಸುತ್ತೋಲೆ ಬರದ ಹಿನ್ನೆಲೆಯಲ್ಲಿ ಬಲವಂತವಾಗಿ ಮಲಯಾಳ ಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸದಂತೆ ಶಾಸಕರ ಸಹಿತ ಜನಪ್ರತಿನಿಧಿ ಗಳೊಂದಿಗೆ ಡಿ.ಡಿ. ಅವರನ್ನು ಭೇಟಿಯಾಗಿ ಮನವಿ ಮಾಡಲು ತೀರ್ಮಾನಿಸಲಾಯಿತು. ಜೂನ್ 24ರ ವರೆಗೆ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು. ಜೂನ್ 30ರೊಳಗೆ ಸಾವಿರಾರು ಸಹಿ ಯನ್ನೊಳಗೊಂಡ ಮನವಿಯನ್ನು ಸಲ್ಲಿ ಸಲು ತೀರ್ಮಾನಿಸಲಾಗಿದೆ.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಸಭೆಯ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಎಸ್.ವಿ. ಭಟ್, ಎಂ.ವಿ. ಮಹಾಲಿಂಗೇಶ್ವರ ಭಟ್ ತಾರಾನಾಥ ಮಧೂರು, ಡಾ| ಬೇ.ಸಿ. ಗೋಪಾಲಕೃಷ್ಣ ಭಟ್, ಬಿ. ರಾಮ ಮೂರ್ತಿ, ವಿ.ಬಿ. ಕುಳಮರ್ವ, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಟಿ. ಶಂಕರ ನಾರಾಯಣ ಭಟ್, ಪ್ರದೀಪ್ ಶೆಟ್ಟಿ, ಸತ್ಯ
ನಾರಾಯಣ ಕಾಸರಗೋಡು, ಗುರು ಪ್ರಸಾದ್ ಕೋಟೆಕಣಿ, ಪ್ರಶಾಂತ್ ಹೊಳ್ಳ, ವಿಶಾಲಾಕ್ಷ ಪುತ್ರಕಳ, ಡಾ| ಯು. ಮಹೇಶ್ವರಿ, ಶ್ಯಾಮಲಾ ರವಿರಾಜ್ ಮೊದಲಾದವರು ಮಾತನಾಡಿದರು.