ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!
Team Udayavani, Oct 18, 2021, 2:00 PM IST
ಮಡಿಕೇರಿ: ಇಲ್ಲಿನ ಅರುವತ್ತೋಕ್ಲು ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ವಿಷ ಸೇವಿಸಿ, ನಾಲ್ಕು ದಿನದ ಬಳಿಕ ಸಾವೀಗೀಡಾದ ಘಟನೆ ನಡೆದಿದೆ.
ಎಚ್.ಆರ್.ರಮ್ಯ (28) ಮೃತಪಟ್ಟಿದ್ದು,ಕೈಕೇರಿ ಗ್ರಾಮದಲ್ಲಿ ವಾಸವಿದ್ದ ಇವರು, ಅ.11 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಾಯಿ ಮನೆಯಲ್ಲಿದ್ದರು. ಶನಿವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡು ಮತ್ತೆ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.
ಈ ಬಗ್ಗೆ ರಮ್ಯ ಸಹೋದರ ವಿನೋದ್ ದೂರು ದಾಖಲಿಸಿದ್ದಾರೆ. ಮೊದಲ ಪತಿಯಿಂದ ದೂರವಾಗಿದ್ದ ರಮ್ಯಳನ್ನು ಪಾಲಿಬೆಟ್ಟದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಡೆತ್ ನೋಟ್ ನಲ್ಲಿ ಈ ಬಗ್ಗೆ ರಮ್ಯ ಉಲ್ಲೇಖಿಸಿದ್ದಾಳೆ ಎಂದು ತಿಳಿದು ಬಂದಿದೆ. ಪಾಲಿಬೆಟ್ಟದ ವ್ಯಕ್ತಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.