“ಆತ್ಮವಿಶ್ವಾಸದಿಂದ ಕನಸು ನನಸಾಗಿಸಲು ಪ್ರಯತ್ನಿಸಿ’
ಪೆರ್ಲ: ದತ್ತಿ ನಿಧಿ ಬಹುಮಾನ ವಿತರಣೆ,ಸಮ್ಮಾನ
Team Udayavani, Aug 3, 2019, 5:36 AM IST
ಪೆರ್ಲ: ವಿದ್ಯಾರ್ಥಿಯು ಜೀವನದಲ್ಲಿ ಸವಾಲುಗಳನ್ನು ಎದುರಿಸಿ, ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಕನಸನ್ನು ನನಸಾಗಿಸಲು ಪ್ರಯತ್ನಿಸ ಬೇಕು.
ವಿದ್ಯಾರ್ಥಿಗಳು ಕನಸಿನ ಮೂಲಕ ಸಾಧನೆಯ ಗುರಿ ಕಾಣಬೇಕು.ಇಲ್ಲದೆ ಇದ್ದಲ್ಲಿ ವೈಯಕ್ತಿಕ ಅಭಿವೃದ್ಧಿ ಹಾಗೂ ರಾಷ್ಟ್ರದ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಕಣ್ಣೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ,ಕಾಸರಗೋಡು ಸರಕಾರಿ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಪ್ರೋ.ವಿಜಯನ್ ಕೆ.ಹೇಳಿದರು.
ಅವರು ಪೆರ್ಲ ನಲಂದ ಮಹಾವಿದ್ಯಾಲಯದಲ್ಲಿ ಆ.1ರಂದು ಜರಗಿದ ಧತ್ತಿನಿಧಿ ಬಹುಮಾನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಆಶಾವಾದಿಗಳಾಗಬೇಕು.ನಿರಂತರ ಪರಿಶ್ರಮದಿಂದ ಭವಿಷ್ಯದಲ್ಲಿ ಉತ್ತಮ ಯಶಸ್ಸುಗಳಿಸಲು ಸಾಧ್ಯ.ಹಿಂದಿನ ಮಹಾಪುರುಷರು ಬಡತನ ಹಿನ್ನೆಲೆಯಿಂದ ಬಂದವರು.ಆದ್ದರಿಂದ ಬಡತನ ಸಾಧನೆಗೆ ಸವಾಲಾಗದು.ಅವಕಾಶ ಲಭಿಸಿದಾಗ ಬಳಸಿಕೊಳ್ಳಬೇಕು ಎಂದರು.
ಪರೀಕ್ಷೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಧತ್ತಿನಿಧಿ ಬಹುಮಾನ ವಿತರಿಸಲಾಯಿತು.ದಾನಿಗಳನ್ನು ಸಮ್ಮಾನಿಸಲಾಯಿತು.
ಆಡಳಿತ ಮಂಡಳಿ ನಿರ್ದೇಶಕ ಶಮ್ನಾ ಖಂಡಿಗೆ ಪ್ರಾಸ್ತವಿಕ ನುಡಿಗಳನ್ನಾಡಿದರು
ಖಜಾಂಜಿ ಗೋಪಾಲ ಚೆಟ್ಟಿಯಾರ್ ಉಪಸ್ಥಿತರಿದ್ದರು.ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿ, ರಾಜಶೇಖರ ಪೆರ್ಲ ವಂದಿಸಿದರು. ಸವಿತಾ ಡಿ.ನಿರೂಪಿಸಿದರು.
“ಶ್ರಮ,ಶ್ರದ್ಧೆಯಿಂದ ಯಶಸ್ಸು
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ಧತ್ತಿನಿಧಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿರಂತರ ಶ್ರಮ,ಶ್ರದ್ಧೆಯಿಂದ ವಿದ್ಯಾರ್ಜನೆಗೈದರೆ ಯಶಸ್ಸು ನಿಮ್ಮದಾಗುವುದು ಎಂದರು.ಕಾಸರಗೋಡು ವ್ಯಾಪಾರಿ ಸಮಿತಿಯ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ,ವಿದ್ಯೆಯು ಎಲ್ಲಾ ಸಂಪತ್ತುಗಳಿಂದ ಶ್ರೇಷ್ಠ .ಅದನ್ನು ಗಳಿಸಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಿ ಎಂದರು.